ಉಡುಪಿ : ಉಡುಪಿಯ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಸುಬ್ರಾಯ ಕಾರಂತ (88) ಅವರು ಏಪ್ರಿಲ್ 19ರಂದು ಉಡುಪಿ ಪುತ್ತೂರಿನಲ್ಲಿರುವ ಸಂಬಂಧಿಕರ ಮನೆಯಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾದರು.

ಅರಕಲಗೂಡಿನಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಕಾರಂತರು ಬಳಿಕ ಶೃಂಗೇರಿ ಬಾಯ್ಸ್ ಮಿಡ್ಲ್ ಸ್ಕೂಲ್ನಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ನಂತರ ತರಿಕೆರೆ ಮತ್ತು ಮೂಡಿಗೆರೆಗಳಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿ, ಕುಂದಾಪುರದಲ್ಲಿ ಸಹಾಯಕ ಶಿಕ್ಷಣಾಧಿಕಾರಿಯಾಗಿ (ಎ.ಇ.ಒ) ಭಡ್ತಿ ಹೊಂದಿದರು. ಬಳಿಕ ಉಡುಪಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ನಿವೃತ್ತಿಯ ನಂತರ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ರೆಸಿಡೆನ್ಸಿಯಲ್ ಸ್ಕೂಲ್ನ ಆರಂಭಿಕ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ, ಸಂಸ್ಥೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದರು. ಶಿಕ್ಷಣ ಇಲಾಖೆಯ ನಿಯಮಾವಳಿಗಳ ಕುರಿತು ಆಳವಾದ ಜ್ಞಾನ ಹೊಂದಿದ್ದ ಅವರು ನೂರಾರು ಶಿಕ್ಷಕರಿಗೆ ಕಾನೂನು ಸಲಹೆಗಳನ್ನು ನೀಡಿ, ಇಲಾಖೆಯ ಸೂಕ್ಷ್ಮ ವಿಚಾರಗಳಲ್ಲಿ ಮಾರ್ಗದರ್ಶನ ನೀಡಿದ ಸಹೃದಯಿಯಾಗಿದ್ದರು. ಸರಳತೆ ಮತ್ತು ಸಜ್ಜನಿಕೆಯ ಶಿಕ್ಷಣ ತಜ್ಞರಾಗಿದ್ದ ಅವರು ನಿವೃತ್ತ ಶಿಕ್ಷಕಿ ಪತ್ನಿ ರಮಾಮಣಿ, ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಆತ್ಮೀಯ ಶಿಕ್ಷಕ ಬಂಧುಗಳನ್ನು ಅಗಲಿದ್ದಾರೆ.



