ಉಡುಪಿ : ಕನ್ನಡದ ವರನಟ ಡಾ. ರಾಜ್ಕುಮಾರ್ ಅವರ ಜೀವನ ಶೈಲಿ, ಮೌಲ್ಯಗಳು ಯುವಜನತೆಗೆ ಆದರ್ಶವಾಗಿದ್ದು, ಅವರ ಬದುಕನ್ನು ಅನುಸರಿಸುವುದು ಸೂಕ್ತ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.

ನಗರದ ಬ್ರಹ್ಮಗಿರಿಯ ರೆಡ್ಕ್ರಾಸ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಡುಪಿ ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ.ರಾಜ್ಕುಮಾರ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಬ್ಬ ಚಿತ್ರ ನಟನ ಜಯಂತಿಯನ್ನು ದೇಶದಲ್ಲೇ ಇಷ್ಟು ವಿಶಿಷ್ಟವಾಗಿ ಆಚರಿಸುವುದು ಅಪರೂಪ. ಡಾ.ರಾಜ್ಕುಮಾರ್ ಅವರು ಕೇವಲ ನಟರಲ್ಲ, ಸರಳ-ಸಜ್ಜನ ವ್ಯಕ್ತಿಯಾಗಿದ್ದರು. ತಮ್ಮ ಜೀವನ ಶೈಲಿಯ ಮೂಲಕ ಸಮಾಜಕ್ಕೆ ಮೌಲ್ಯಗಳನ್ನು ಬೋಧಿಸಿದ್ದಾರೆ ಎಂದು ಹೇಳಿದರು.

ಭಾರತೀಯ ರೆಡ್ಕ್ರಾಸ್ ರಾಜ್ಯ ಸಭಾಪತಿ ಬಸರೂರು ರಾಜೀವ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಚಲನಚಿತ್ರ ಕಲಾವಿದೆ ಪ್ರತಿಮಾ ನಾಯಕ್ ಉಪನ್ಯಾಸ ನೀಡಿ, ಅಭಿಜಾತ ಕಲಾ ಪ್ರತಿಭೆಯಿಂದ ಡಾಕ್ಟರೇಟ್ ಪಡೆದ ಡಾ.ರಾಜ್ಕುಮಾರ್ ಅವರ ಜೀವನವೇ ದಂತಕಥೆ. ಅವರ ನಟನೆ, ಗಾಯನ ಮತ್ತು ಸಾಮಾಜಿಕ ಸಂದೇಶಗಳು ಜನರಲ್ಲಿ ಚಿರಸ್ಥಾಯಿಯಾಗಿವೆ” ಎಂದರು.

ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಪ್ರಾಸ್ತಾವಿಕವಾಗಿ ಮಾತನಾಡಿ, ಐದು ದಶಕಗಳ ಕಾಲ 212 ಚಿತ್ರಗಳಲ್ಲಿ ಅಭಿನಯಿಸಿದ ಡಾ.ರಾಜ್ಕುಮಾರ್ ಕನ್ನಡಿಗರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಿಂದ ಪಡೆದ ಹಣವನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ದೇಣಿಗೆ ನೀಡಿದಂತಹ ಅವರ ಸಮಾಜಪರ ಚಟುವಟಿಕೆಗಳು ಅನುಕರಣೀಯ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ದಿಶಾ ಹಾಗೂ ದಿಯಾ ಡಾ.ರಾಜ್ಕುಮಾರ್ ಅವರ ಚಿತ್ರಗೀತೆಗಳನ್ನು ಹಾಡಿದರು. ಲಯನ್ಸ್ ಮಿಡ್ಟೌನ್ ಅಧ್ಯಕ್ಷ ಪುರುಷೋತ್ತಮ್ ನಾಯಕ್, ಡಾ.ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ, ರೆಡ್ಕ್ರಾಸ್ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



