ಉಡುಪಿ : ಗೋಮಾತೆಯ ಗೌರವ ಅಭಿಯಾನದ ಅಂಗವಾಗಿ ಗೋ ಸಂರಕ್ಷಣೆ ಮತ್ತು ಗೋವಂಶದ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಸೋಮವಾರ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳ ಪರವಾಗಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮನವಿ ಸ್ವೀಕರಿಸಿದರು.

ಮನವಿಯಲ್ಲಿ ದೇಶಾದ್ಯಂತ ಗೋಹತ್ಯೆ ನಿಷೇಧವನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು, ಹಸುವಿಗೆ ರಾಷ್ಟ್ರಮಾತೆ ಅಥವಾ ರಾಷ್ಟ್ರೀಯ ಗೌರವದ ಸ್ಥಾನಮಾನ ನೀಡಬೇಕು, ಗೋಸೇವೆಗಾಗಿ ಪ್ರತ್ಯೇಕ ಕೇಂದ್ರ ಕಾನೂನು ಜಾರಿಗೊಳಿಸಿ ಕೇಂದ್ರೀಯ ಸಚಿವಾಲಯವನ್ನು ಸ್ಥಾಪಿಸಬೇಕು, ಮೇವು ಭದ್ರತಾ ನೀತಿಯನ್ನು ಅಂತಿಮಗೊಳಿಸಬೇಕು ಹಾಗೂ ದೇಶೀಯ ಗೋವಂಶದಿಂದ ದೊರೆಯುವ ಪಂಚಗವ್ಯ ಉತ್ಪನ್ನಗಳ ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಈ ಮನವಿಯ ಪ್ರತಿಯನ್ನು ರಾಜ್ಯಪಾಲರಿಗೂ ಸಲ್ಲಿಸಲಾಗಿದೆ ಎಂದು ಅಭಿಯಾನದ ಪ್ರಮುಖರು ತಿಳಿಸಿದ್ದಾರೆ. ಮನವಿ ಸಲ್ಲಿಸುವ ಸಂದರ್ಭದಲ್ಲಿ ಗೋಮಾತೆಯ ಗೌರವ ಅಭಿಯಾನದ ತಾಲೂಕು ಸಂಚಾಲಕರಾದ ವಿಜಯ್ ಕೊಡವೂರು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಬ್ರಹ್ಮಾವರ ತಾಲೂಕು ಪ್ರಮುಖರಾದ ರಾಘವೇಂದ್ರ ಪ್ರಭು ಕರ್ವಾಲು, ವೀಣಾ ಶೆಟ್ಟಿ, ರಮಿತಾ ಸೂರ್ಯವಂಶಿ, ಸಂತೋಷ್ ಹಾಗೂ ಎಬಿವಿಪಿ ಪ್ರಮುಖ ರಂಜಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


