ಉಡುಪಿ : ನಗರಸಭೆ ವ್ಯಾಪ್ತಿಯ 34ನೇ ಶಿರಿಬೀಡು ವಾರ್ಡ್ನ ಪುಳಿಮಾರು ಜಂಕ್ಷನ್ನಿಂದ ಪ್ರಗತಿನಗರ ಹಾಗೂ ಹಳೆ ಸರ್ಕಾರಿ ಬಸ್ ನಿಲ್ದಾಣ ಸಂಪರ್ಕಿಸುವ ರಸ್ತೆ ಅಪಾಯಕಾರಿಯಾಗಿ ಪರಿಣಮಿಸಿದ್ದು, ತಕ್ಷಣ ತಡೆಬೇಲಿ ನಿರ್ಮಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಿರಿದಾಗಿರುವ ಈ ರಸ್ತೆಯ ಅಂಚಿನಲ್ಲಿ ಮಳೆ ನೀರು ಹರಿಯುವ ತೆರೆದ ಕಾಲುವೆ ಇದ್ದು, ಯಾವುದೇ ರಕ್ಷಣಾತ್ಮಕ ತಡೆಬೇಲಿ ಇಲ್ಲದಿರುವುದು ಅಪಾಯಕ್ಕೆ ಕಾರಣವಾಗಿದೆ. ಪರಿಣಾಮ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪುವ ಹಾಗೂ ಪಾದಚಾರಿಗಳು ಕಾಲುಜಾರಿ ಕಾಲುವೆಗೆ ಬೀಳುವ ಸಂಭವ ಹೆಚ್ಚಾಗಿದೆ. ಈ ಭಾಗದಲ್ಲಿ ಈಗಾಗಲೇ ಸಾರ್ವಜನಿಕರು ಕಾಲುವೆಗೆ ಬಿದ್ದಿರುವ ಘಟನೆಗಳು ನಡೆದಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ನಗರ ಪ್ರವೇಶಿಸಲು ಸಮೀಪದ ಮಾರ್ಗವಾಗಿರುವುದರಿಂದ ಈ ರಸ್ತೆಯಲ್ಲಿ ಸಾರ್ವಜನಿಕರ ಸಂಚಾರ ಹೆಚ್ಚಾಗಿದೆ. ವಿಶೇಷವಾಗಿ ವಲಸೆ ಕಾರ್ಮಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ಪ್ರತಿದಿನ ಈ ರಸ್ತೆಯನ್ನು ಬಳಸುತ್ತಿರುವ ಹಿನ್ನೆಲೆಯಲ್ಲಿ ಅಪಾಯ ಮತ್ತಷ್ಟು ಗಂಭೀರವಾಗಿದೆ.

ಜಿಲ್ಲಾಡಳಿತ ಹಾಗೂ ನಗರಾಡಳಿತ ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ತಡೆಬೇಲಿ ನಿರ್ಮಾಣ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ತಾರಾನಾಥ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.



