ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೃಷ್ಣನಗರಿ ಉಡುಪಿಯಲ್ಲಿ ಭಕ್ತಿಯ ಸಂಭ್ರಮ ಕಳೆಗಟ್ಟಿತು. ಚಂದ್ರೋದಯದ ವೇಳೆಯಲ್ಲಿ ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನತೀರ್ಥ ಸ್ವಾಮೀಜಿ ಹಾಗೂ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ಕೃಷ್ಣಾರ್ಘ್ಯ ಸಮರ್ಪಿಸುವ ಮೂಲಕ ಜನ್ಮಾಷ್ಟಮಿ ಆಚರಣೆಗೆ ವಿಶೇಷ ಮೆರುಗು ನೀಡಿದರು.

ದಿನವಿಡೀ ಉಪವಾಸವಿದ್ದ ಶ್ರೀಗಳು ಮಧ್ಯರಾತ್ರಿ ನೀರು ಹಾಗೂ ಹಾಲಿನ ಮೂಲಕ ಶ್ರೀಕೃಷ್ಣನಿಗೆ ಅರ್ಘ್ಯ ಸಮರ್ಪಿಸಿದರು. ಬಳಿಕ ಮಠದ ಹೊರಭಾಗದಲ್ಲಿರುವ ತುಳಸಿಗೆ ಅರ್ಘ್ಯ ನೀಡಿ, ತುಳಸಿ ಮೂಲಕ ಚಂದ್ರನಿಗೂ ಅರ್ಘ್ಯ ಅರ್ಪಿಸಿದರು. ಅರ್ಘ್ಯ ಸಮರ್ಪಣೆಯ ಬಳಿಕ ಮಹಾಪೂಜೆ ಹಾಗೂ ಉಂಡೆ–ಚಕ್ಕುಲಿ ನೈವೇದ್ಯ ಸಮರ್ಪಿಸಲಾಯಿತು.

ಶ್ರೀಗಳ ಕೃಷ್ಣಾರ್ಘ್ಯ ಪೂಜೆ ಪೂರ್ಣಗೊಂಡ ಬಳಿಕ ಭಕ್ತರು ಸರತಿಸಾಲಿನಲ್ಲಿ ನಿಂತು ಸಾಮೂಹಿಕವಾಗಿ ಅರ್ಘ್ಯ ಸಮರ್ಪಿಸಿದರು. ಕೃಷ್ಣನಾಮ ಸ್ಮರಣೆ, ಭಕ್ತರ ಜೈಕಾರ ಹಾಗೂ ಗಂಟೆ–ವಾದ್ಯಗಳ ನಾದದಿಂದ ಶ್ರೀಕೃಷ್ಣ ಮಠದ ಪರಿಸರ ಸಂಪೂರ್ಣ ಭಕ್ತಿಮಯವಾಗಿತ್ತು.

ಜನ್ಮಾಷ್ಟಮಿಯ ಧಾರ್ಮಿಕ ಸಂಭ್ರಮದ ಬೆನ್ನಲ್ಲೇ ಉಡುಪಿಯ ವಿಟ್ಲಪಿಂಡಿ ಮಹೋತ್ಸವಕ್ಕೂ ಭರ್ಜರಿ ಸಿದ್ಧತೆ ನಡೆದಿದೆ. ಕೃಷ್ಣನ ಮೃಣ್ಮಯ ವಿಗ್ರಹದ ಮೆರವಣಿಗೆ, ಹುಲಿವೇಷ ಕುಣಿತ ಹಾಗೂ ಕರಾವಳಿಯ ಸಾಂಪ್ರದಾಯಿಕ ಜನಪದ ಕಲಾ ಪ್ರದರ್ಶನಗಳು ಉತ್ಸವಕ್ಕೆ ಮತ್ತಷ್ಟು ರಂಗು ತುಂಬಲಿವೆ. ಹೀಗೆ ಕೃಷ್ಣಾರ್ಘ್ಯದ ಭಕ್ತಿಭಾವದಿಂದ ವಿಟ್ಲಪಿಂಡಿಯ ಜನಪದ ಸಂಭ್ರಮದವರೆಗೆ ಉಡುಪಿಯ ಜನ್ಮಾಷ್ಟಮಿ ಆಚರಣೆ ಧಾರ್ಮಿಕತೆ, ಸಂಪ್ರದಾಯ ಮತ್ತು ಕರಾವಳಿಯ ಸಾಂಸ್ಕೃತಿಕ ವೈಭವದ ಅಪೂರ್ವ ಸಂಗಮವಾಗಿ ಕಂಗೊಳಿಸಿತು.



