ಉಡುಪಿ : ಮಣಿಪಾಲದ ಈಶ್ವರನಗರದಲ್ಲಿರುವ ನಂದಿನಿ ಡೈರಿಯ ಹಳೆಯ ಕಟ್ಟಡದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಅಗ್ನಿ ಅವಘಡದಿಂದ ಭಾರೀ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಅದೃಷ್ಟವಶಾತ್, ಸಮಯಪ್ರಜ್ಞೆಯಿಂದಾಗಿ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳಾಗದೆ ಭಾರೀ ಅನಾಹುತವೊಂದು ತಪ್ಪಿದೆ.

ಕಟ್ಟಡದಲ್ಲಿ ನಿರ್ವಹಣಾ ಕಾರ್ಯದ ಭಾಗವಾಗಿ ವೆಲ್ಡಿಂಗ್ ಕೆಲಸ ನಡೆಯುತ್ತಿತ್ತು. ಈ ವೇಳೆ ವೆಲ್ಡಿಂಗ್ನಿಂದ ಹಾರಿಬಂದ ಕಿಡಿಯೊಂದು ಸಮೀಪದಲ್ಲಿದ್ದ ಆಯಿಲ್ ಕ್ಯಾನ್ ಮೇಲೆ ಬಿದ್ದಿದೆ.

ಇದರಿಂದಾಗಿ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಅದು ಪಕ್ಕದಲ್ಲಿದ್ದ ಬಾಯ್ಲರ್ಗೂ ವಿಸ್ತರಿಸಿದೆ. ಬೆಂಕಿಯ ತೀವ್ರತೆ ಹೆಚ್ಚಾದಂತೆ ಕಪ್ಪು ಹೊಗೆ ಆವರಿಸಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಸಕಾಲದಲ್ಲಿ ನಿಯಂತ್ರಣ ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದರು. ಅಗ್ನಿಶಾಮಕ ದಳದವರು ಸಕಾಲದಲ್ಲಿ ಸ್ಥಳಕ್ಕೆ ತಲುಪಿದ್ದರಿಂದ ಬೆಂಕಿ ಪಕ್ಕದ ಕಟ್ಟಡಗಳಿಗೆ ಹರಡದಂತೆ ತಡೆಯಲು ಸಾಧ್ಯವಾಯಿತು.

ಘಟನೆಯಲ್ಲಿ ಡೈರಿಯ ಹಳೆಯ ಕಟ್ಟಡದ ಆಸ್ತಿಪಾಸ್ತಿಗಳಿಗೆ ಭಾರೀ ಹಾನಿಯಾಗಿದೆ. ಅಗ್ನಿ ಅವಘಡದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿದಿದೆ.



