ಉಡುಪಿ : ಭಾರೀ ಗಾಳಿಯಬ್ಬರಕ್ಕೆ ಮೀನುಗಾರಿಕಾ ದೋಣಿ ಅಲುಗಾಡಿದ ಪರಿಣಾಮ ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರರೊಬ್ಬರು ಮೃತಪಟ್ಟ ಘಟನೆ ಮರವಂತೆ ಹೊರಬಂದರಿನಲ್ಲಿ ಬುಧವಾರ ಮುಂಜಾನೆ ನಡೆದಿದೆ.ಮರವಂತೆ ನಿವಾಸಿ ನಾಗರಾಜ್ ಖಾರ್ವಿ (40) ಮೃತರು. ಬುಧವಾರ ಮುಂಜಾನೆ 4.30ರ ಸುಮಾರಿಗೆ ಮನೆಯಿಂದ ಮೀನುಗಾರಿಕೆಗೆಂದು ಹೊರಟು ಮರವಂತೆ ಬಂದರಿಗೆ ಬಂದಿದ್ದ ನಾಗರಾಜ್, ಸುಮಾರು 5 ಗಂಟೆಗೆ ಬಂದರಿನಿಂದ 200 ಮೀಟರ್ ದೂರ ಅರಬ್ಬಿ ಸಮುದ್ರದಲ್ಲಿ ದೋಣಿಯಲ್ಲಿ ತೆರಳುತ್ತಿದ್ದಾಗ ಏಕಾಏಕಿ ಜೋರಾಗಿ ಗಾಳಿ ಬೀಸಿದೆ. ಇದರಿಂದ ದೋಣಿ ಅಲುಗಾಡಿದ್ದು, ಆಯತಪ್ಪಿದ ನಾಗರಾಜ್ ಸಮುದ್ರಕ್ಕೆ ಬಿದ್ದಿದ್ದಾರೆ.

ತಕ್ಷಣ ದೋಣಿಯಲ್ಲಿದ್ದವರು ಅವರನ್ನು ಮೇಲಕ್ಕೆತ್ತಿ ಪ್ರಾಥಮಿಕ ಉಪಚಾರ ನೀಡಿ, ಕುಂದಾಪುರದ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವರನ್ನು ಪರೀಕ್ಷಿಸಿದ ವೈದ್ಯರು ನಾಗರಾಜ್ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತರು ಪತ್ನಿ ಹಾಗೂ 7 ವರ್ಷದ ಪುತ್ರ ಮತ್ತು 5 ವರ್ಷದ ಪುತ್ರಿಯನ್ನು ಅಗಲಿದ್ದಾರೆ. ಮೃತರ ಸಹೋದರ ಶ್ರೀನಿವಾಸ ಖಾರ್ವಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ಬೆಳಗ್ಗೆ ಗಂಗೊಳ್ಳಿ, ಮರವಂತೆ, ಕೊಡೇರಿ ಹಾಗೂ ಶಿರೂರು ಭಾಗಗಳಿಂದ ಹಲವು ಬೋಟುಗಳು ಮತ್ತು ದೋಣಿಗಳು ಮೀನುಗಾರಿಕೆಗೆ ತೆರಳಿದ್ದವು. ಆದರೆ ಸಮುದ್ರದಲ್ಲಿ ಭಾರೀ ಗಾಳಿ ಬೀಸಿದ ಹಿನ್ನೆಲೆಯಲ್ಲಿ ಮೀನುಗಾರಿಕೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಬಹುತೇಕ ಬೋಟು ಹಾಗೂ ದೋಣಿಗಳು ದಡಕ್ಕೆ ವಾಪಸಾಗಿವೆ.


