ಉಡುಪಿ : ತೆಂಗಿನಕಾಯಿ ತೆಗೆಯಲು ಮರ ಹತ್ತಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದಲ್ಲಿ ನಡೆದಿದೆ. ಯಡ್ತರೆ ಗ್ರಾಮದ ವಸಂತ (48) ಮೃತರು. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನಾಗೂರಿನಲ್ಲಿ ವಾಸವಾಗಿದ್ದು, ತೆಂಗಿನಕಾಯಿ ತೆಗೆಯುವ ಹಾಗೂ ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದರು.

ಸೆ.7ರಂದು ಬೆಳಗ್ಗೆ ಸುಮಾರು 10.30ಕ್ಕೆ ಯಡ್ತರೆ ಗ್ರಾಮದ ಯೋಜನಾ ನಗರದ ಪ್ರಕಾಶ್ ನಜರತ್ ಅವರ ಮನೆಯ ತೆಂಗಿನ ಮರದಿಂದ ತೆಂಗಿನಕಾಯಿ ತೆಗೆಯಲು ವಸಂತ ಅವರು ಮರ ಹತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಕೆಳಗೆ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ಕೂಡಲೇ ಅವರನ್ನು ಚಿಕಿತ್ಸೆಗೆ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ 10.45ರ ಸುಮಾರಿಗೆ ಮೃತಪಟ್ಟಿದ್ದಾರೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


