ಉಡುಪಿ: ನಗರದ ಕಲ್ಯಾಣ ಜ್ಯುವೆಲ್ಲರಿ ಜಂಕ್ಷನ್ ಬಳಿ ಟ್ರಾಫಿಕ್ ಸಿಗ್ನಲ್ ಅಳವಡಿಕೆಗಾಗಿ ಇರಿಸಲಾಗಿದ್ದ ಸುಮಾರು 8 ಲಕ್ಷ ಮೌಲ್ಯದ ಬಿಡಿಭಾಗಗಳು ಕಳವಾಗಿರುವ ಘಟನೆ ಬೆಳಕಿಗೆ ಬಂದಿದೆ.

ಹೈದರಾಬಾದ್ ಮೂಲದ ಸಂಸ್ಥೆಯೊಂದರ ಪರವಾಗಿ ಶ್ರೀನಿವಾಸ ಏಲೂರಿ ಅವರು ನೀಡಿದ ದೂರಿನಂತೆ, 2023ರ ಜುಲೈ 18ರಂದು ಟ್ರಾಫಿಕ್ ಸಿಗ್ನಲ್ ಅಳವಡಿಕೆ ಯೋಜನೆಗಾಗಿ ಅಗತ್ಯವಿದ್ದ ಬಿಡಿಭಾಗಗಳನ್ನು ಕಲ್ಯಾಣ ಜ್ಯುವೆಲ್ಲರಿ ಜಂಕ್ಷನ್ ಬಳಿ ತಂದು ಇರಿಸಲಾಗಿತ್ತು.

ಯೋಜನೆ ವಿಳಂಬಗೊಂಡ ಹಿನ್ನೆಲೆಯಲ್ಲಿ ಉಡುಪಿ ನಗರಸಭೆ ಅಧಿಕಾರಿಗಳು ಆಕ್ಷೇಪಣೆ ವ್ಯಕ್ತಪಡಿಸಿದ್ದರಿಂದ ಬಿಡಿಭಾಗಗಳನ್ನು ಅಲ್ಲಿಯೇ ಇರಿಸಿ ತೆರಳಲಾಗಿತ್ತು ಎನ್ನಲಾಗಿದೆ. ಆ.22ರಂದು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ 8 ಲಕ್ಷ ಮೌಲ್ಯದ ಬಿಡಿಭಾಗಗಳು ಕಳವಾಗಿರುವುದು ಗೊತ್ತಾಗಿದೆ. ಈ ಕುರಿತು ಶ್ರೀನಿವಾಸ ಏಲೂರಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


