ಉಡುಪಿ : ಕನ್ನಡ ಚಲನಚಿತ್ರರಂಗದ ಖ್ಯಾತ ಹಿರಿಯ ನಟ ಶಶಿಕುಮಾರ್ ಅವರು ಶುಕ್ರವಾರ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಮಾರಿಯಮ್ಮ ದೇವಿಯ ದರ್ಶನ ಪಡೆದರು.

ದೇವಳದ ವೈಭವ ಹಾಗೂ ವಿಶೇಷವಾಗಿ ಸ್ವರ್ಣ ಗದ್ದುಗೆ ಮತ್ತು ವಿವಿಧ ಶೈಲಿಯ ಕಲಾತ್ಮಕ ಕೆತ್ತನೆಗಳನ್ನು ವೀಕ್ಷಿಸಿದ ಅವರು, ಈ ಅದ್ಭುತ ಕೆಲಸವನ್ನೆಲ್ಲ ಕಾಪುವಿನ ಅಮ್ಮನೇ ಮಾಡಿಸಿಕೊಂಡಿದ್ದಾರೆ. ಕ್ಷೇತ್ರದ ಆಧ್ಯಾತ್ಮಿಕ ವಾತಾವರಣ ಮನಸ್ಸಿಗೆ ಅಪಾರ ಸಂತೋಷ ನೀಡಿದೆ. ಅವಕಾಶ ಸಿಕ್ಕಾಗ ಮತ್ತೆ ಮತ್ತೆ ಇಲ್ಲಿಗೆ ಭೇಟಿ ನೀಡುತ್ತೇನೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಹಾಗೂ ಅಭಿವೃದ್ಧಿ ಸಮಿತಿ ವತಿಯಿಂದ ಅವರನ್ನು ಸನ್ಮಾನಿಸಿ, ಅಮ್ಮನ ಅನುಗ್ರಹ ಪ್ರಸಾದ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾತೃ ವೈಭವ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಪ್ರಬಂಧಕ ಗೋವರ್ಧನ್ ಸೇರಿಗಾರ್ ಸೇರಿದಂತೆ ಹಲವು ಭಕ್ತರು ಹಾಗೂ ದೇವಸ್ಥಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.



