ಉಡುಪಿ : ಕುಂದಾಪುರ ಸಮೀಪದ ಕುಂಭಾಶಿಯ ಪ್ರಸಿದ್ಧ ಆನೆಗುಡ್ಡೆ ವಿನಾಯಕ ದೇವಸ್ಥಾನದ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಕಾರಿನ ಮಾಲೀಕತ್ವ ವಿಚಾರವಾಗಿ ಗಲಾಟೆ ನಡೆಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡಿದ ಆರೋಪದಲ್ಲಿ ಬೆಂಗಳೂರು ಮೂಲದ ಮೂವರ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ನಿವಾಸಿಗಳಾದ ನಿತೀನ್ ಎಸ್. ಹಾಗೂ ವಿದ್ಯಾ ಪಿ. ದಂಪತಿಗಳು ಜಂಟಿಯಾಗಿ ಹಣ ಹೂಡಿ ಹುಂಡೈ ಐ-20 ಕಾರು ಖರೀದಿಸಿದ್ದರು. ಕಾರು ವಿದ್ಯಾ ಪಿ. ಅವರ ಹೆಸರಿನಲ್ಲಿ ನೋಂದಣಿಯಾಗಿದ್ದರೂ, ಮಾಲೀಕತ್ವದ ವಿಚಾರವಾಗಿ ದಂಪತಿಗಳ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ತಿಳಿದುಬಂದಿದೆ. ಶನಿವಾರ ಮಧ್ಯಾಹ್ನ ಕುಂಭಾಶಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮೆಟ್ಟಿಲುಗಳ ಸಮೀಪ ಈ ವಿಚಾರ ತೀವ್ರ ವಾಗ್ವಾದಕ್ಕೆ ತಿರುಗಿದೆ. ಆರೋಪಿಗಳಾದ ವಿದ್ಯಾ ಪಿ., ನಿತೀನ್ ಅವರ ತಾಯಿ ಸುಕನ್ಯಾ ಹಾಗೂ ಪ್ರಭಾಕರ ಪಿ. ಸಾರ್ವಜನಿಕ ಸ್ಥಳದಲ್ಲಿ ಜೋರಾಗಿ ಕೂಗಾಡುತ್ತಾ ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ.

ಈ ವೇಳೆ ವಿದ್ಯಾ ಅವರು ಕಾರಿನ ಮುಂಭಾಗ ನೆಲದ ಮೇಲೆ ಕುಳಿತು ಈ ಕಾರಿನ ಮಾಲೀಕಳು ನಾನು, ಕಾರು ನನಗೆ ಬೇಕು ಎಂದು ಹಠ ಹಿಡಿದು ಬೊಬ್ಬೆ ಹಾಕಿದ್ದರೆ, ಉಳಿದವರೂ ಸಾರ್ವಜನಿಕವಾಗಿ ವಾಗ್ವಾದಕ್ಕಿಳಿದ ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ದೇವಸ್ಥಾನದ ಆವರಣದಲ್ಲಿ ಗಲಾಟೆ ನಡೆಯುತ್ತಿರುವ ಬಗ್ಗೆ 112 ತುರ್ತು ಸೇವೆಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಎರಡೂ ಕಡೆಯವರಿಗೆ ಬುದ್ಧಿವಾದ ಹೇಳಿದ್ದಾರೆ. ಆದರೂ ಮಧ್ಯಾಹ್ನ 2.30ರ ಸುಮಾರಿಗೆ ಮತ್ತೆ ಗಲಾಟೆ ಮುಂದುವರಿಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡಿದ್ದಾರೆ ಎಂದು ದೂರಲಾಗಿದೆ.

ದೇವಸ್ಥಾನದಂತಹ ಪವಿತ್ರ ಸ್ಥಳದಲ್ಲಿ ಸಾರ್ವಜನಿಕರಿಗೆ ಮುಜುಗರ ಉಂಟುಮಾಡಿ ಶಾಂತಿ ಭಂಗ ಮಾಡಿದ ಹಿನ್ನೆಲೆಯಲ್ಲಿ, ಎಎಸ್ಐ ವಿಲ್ಫ್ರೇಡ್ ಡಿಸೋಜಾ ನೀಡಿದ ದೂರಿನ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



