ಉಡುಪಿ : ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ಆನ್ಲೈನ್ ವಂಚನೆ ಎಸಗಿರುವ ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಮ್ರಗೋಡು ಗ್ರಾಮದ ನಿವಾಸಿ ಅರುಣ ಆಚಾರ್ಯ (30) ಎಂಬವರ ಇನ್ಸ್ಟಾಗ್ರಾಂ ಖಾತೆಗೆ 2024ರ ಜುಲೈ 22ರಂದು ಕಂಪನಿಯೊಂದರ ಹೆಸರಿನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಸಂಬಂಧಿತ ಜಾಹೀರಾತು ಬಂದಿತ್ತು. ಇದಕ್ಕೆ ಸ್ಪಂದಿಸಿದ ಅರುಣ ಅವರು ಜಾಹೀರಾತಿನಲ್ಲಿ ನೀಡಿದ್ದ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿದಾಗ, ಅಪರಿಚಿತ ವ್ಯಕ್ತಿಯೊಬ್ಬರು ವಾಟ್ಸಾಪ್ ಮೂಲಕ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ದೊರೆಯುತ್ತದೆ ಎಂದು ತರಬೇತಿ ನೀಡಿರುವುದಾಗಿ ದೂರಲಾಗಿದೆ.

ಪ್ರಾರಂಭದಲ್ಲಿ ಹೂಡಿಕೆ ಮಾಡಿದ ಮೊತ್ತಕ್ಕೆ ಉತ್ತಮ ಲಾಭವನ್ನು ನೀಡಿ ನಂಬಿಕೆ ಮೂಡಿಸಿದ ಆರೋಪಿಗಳು, ಬಳಿಕ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಇದನ್ನು ನಂಬಿದ ಅರುಣ ಅವರು 2024ರ ಸೆಪ್ಟಂಬರ್ನಿಂದ ಡಿಸೆಂಬರ್ 19ರವರೆಗೆ ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಂದ ಆರೋಪಿಗಳ ಖಾತೆಗೆ ಹಂತಹಂತವಾಗಿ ಒಟ್ಟು 15,95,005.90 ರೂಪಾಯಿ ಮೊತ್ತವನ್ನು ವರ್ಗಾವಣೆ ಮಾಡಿದ್ದಾರೆ.

ಆದರೆ ಹೂಡಿಕೆ ಮಾಡಿದ ಹಣವನ್ನಾಗಲಿ, ಲಾಭವನ್ನಾಗಲಿ ವಾಪಸ್ ನೀಡದೇ ಆರೋಪಿಗಳು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



