ಕೊಲ್ಲೂರು: ಸೌಪರ್ಣಿಕಾ ನದಿಯಲ್ಲಿ ಯುವಕನೋರ್ವ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪಪ್ರಚಾರವೇ ಕಾರಣ ಎನ್ನುವ ಮಾಹಿತಿ ಹೊರಗೆ ಬಿದ್ದಿದೆ. ಅಲ್ಲದೇ ಅಪಪ್ರಚಾರ ಮಾಡಿದ ಇಬ್ಬರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಕೊಲ್ಲೂರಿನ ನಟೇಶ್ (36) ಆತ್ಮಹತ್ಯೆ ಮಾಡಿಕೊಂಡವರು.
ನಟೇಶ್ ಇದೇ ಆ.7ರಂದು ಸೌಪರ್ಣಿಕಾ ನದಿಯಲ್ಲಿ ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದರು. ಈ ಕುರಿತು ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೌಪರ್ಣಿಕಾ ನದಿಯ ದಡದಲ್ಲಿ ನಿಲ್ಲಿಸಿದ್ದ ನಟೇಶ್ ಅವರ ಕಾರನ್ನು ಮನೆಗೆ ಕೊಂಡೊಯ್ಯಲಾಗಿತ್ತು. ಆ.8 ರಂದು ಬೆಳಗ್ಗೆ ಮನೆಮಂದಿ ನಟೇಶ್ ರ ಕಾರಿನ ಒಳಗೆ ಪರಿಶೀಲಿಸಿದಾಗ ನಟೇಶ್ ಬಳಸುತ್ತಿದ್ದ ಮೊಬೈಲ್ ಮತ್ತು ಅದರ ಜೊತೆಗೆ ಒಂದು ಚೀಟಿ ಲಭಿಸಿದೆ. ಆ ಚೀಟಿಯಲ್ಲಿ ತನ್ನ ಸಾವಿನ ರಹಸ್ಯ ಮೊಬೈಲ್ ಗ್ಯಾಲರಿಯಲ್ಲಿದೆ ಎಂದು ಬರೆದು ಮೊಬೈಲ್ ಪಾಸ್ ವರ್ಡ್ ಅನ್ನು ಕೂಡಾ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೊಬೈಲ್ ಅನ್ನು ಪರಿಶೀಲಿಸಿದಾಗ ಸಂತು ಮತ್ತು ನಾಗೇಶ/ದಳಿ ನಾಗ ಎಂಬವರು ತನ್ನ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದು, ಇದರಿಂದ ಮನನೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ನಟೇಶ್ ಮಾಡಿರುವ ವೀಡಿಯೊ ಪತ್ತೆಯಾಗಿದೆ.
ತಕ್ಷಣ ಈ ಕುರಿತು ಕೊಲ್ಲೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವ ನಟೇಶ್ ಮನೆಯವರು ಬೇಕಾದ ಪೂರಕ ಸಾಕ್ಷಿಯನ್ನು ದೂರಿನೊಂದಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತು ಯಾನೆ ಸಂತೋಷ್ ಮತ್ತು ದಳಿ ನಾಗ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


