ಉಡುಪಿ : ಸೆಪ್ಟೆಂಬರ್ 7ರಂದು ಕುಂದಾಪುರದಿಂದ ಸಾಸ್ತಾನದವರೆಗೆ ನಡೆಯಲಿರುವ ವಂದೇ ಮಾತರಂ ಜನಜಾಗೃತಿ ಕಾಲ್ನಡಿಗೆ ಜಾಥಾಕ್ಕೆ ಸರ್ವರೂ ಬೆಂಬಲ ನೀಡುವಂತೆ ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಂದೇ ಮಾತರಂ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದು, ಪ್ರತಿಯೊಬ್ಬ ಭಾರತೀಯನಲ್ಲೂ ದೇಶಭಕ್ತಿ ಹಾಗೂ ರಾಷ್ಟ್ರೀಯತೆಯ ಭಾವನೆ ಮೂಡಿಸುವ ಶಕ್ತಿಯಿದೆ ಎಂದರು. ಜಾಥಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳು ಪಾಲ್ಗೊಳ್ಳುವಂತೆ ಕರೆ ನೀಡಿದರು.

ಕೇರಳದ ರಾಜ್ಯಸಭಾ ಸದಸ್ಯ ಸಿ. ಸದಾನಂದನ್ ಮಾಸ್ತರ್ ಅವರು ತ್ರಿವರ್ಣ ಧ್ವಜ ಅರಳಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಉಗ್ರಗಾಮಿಗಳ ದಾಳಿಯಲ್ಲಿ ಕಾಲುಗಳನ್ನು ಕಳೆದುಕೊಂಡಿದ್ದರೂ ಕೃತಕ ಕಾಲುಗಳ ನೆರವಿನಿಂದ ದೇಶಾದ್ಯಂತ ವಂದೇ ಮಾತರಂ ಜನಜಾಗೃತಿ ಅಭಿಯಾನದಲ್ಲಿ ಭಾಗವಹಿಸುತ್ತಿರುವ ಸದಾನಂದನ್ ಮಾಸ್ತರ್ ಜಾಥಾದಲ್ಲಿ ವಿಶೇಷ ಆಕರ್ಷಣೆಯಾಗಲಿದ್ದಾರೆ ಎಂದು ಕೋಟ ತಿಳಿಸಿದರು.

ಬೆಳಿಗ್ಗೆ 8.30ಕ್ಕೆ ಕುಂದಾಪುರ ಬಸ್ ನಿಲ್ದಾಣದಿಂದ ಜಾಥಾ ಆರಂಭವಾಗಲಿದೆ. ಬೆಳಿಗ್ಗೆ 9.30ಕ್ಕೆ ಶಾಸ್ತ್ರಿ ಸರ್ಕಲ್, 11.30ಕ್ಕೆ ಕೋಟೇಶ್ವರ ರಥಬೀದಿ, ಮಧ್ಯಾಹ್ನ 1ಕ್ಕೆ ತೆಕ್ಕಟ್ಟೆ ತಲುಪಲಿದೆ. ಬಳಿಕ 2ಕ್ಕೆ ತೆಕ್ಕಟ್ಟೆಯಿಂದ ಹೊರಟು 3ಕ್ಕೆ ಕೋಟ, 4ಕ್ಕೆ ಸಾಲಿಗ್ರಾಮ ಹಾಗೂ ಸಂಜೆ 5ಕ್ಕೆ ಸಾಸ್ತಾನದ ಟೋಲ್ಗೇಟ್ ಮೂಲಕ ಸಾಗಿ 5.30ಕ್ಕೆ ಸಾಸ್ತಾನ ಬಸ್ ನಿಲ್ದಾಣದ ಬಳಿ ಸಮಾರೋಪಗೊಳ್ಳಲಿದೆ.

ಜಾಥಾದುದ್ದಕ್ಕೂ ತ್ರಿವರ್ಣ ಧ್ವಜಕ್ಕೆ ಪುಷ್ಪಾರ್ಚನೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.


