ಉಡುಪಿ : ಹೊಸಂಗಡಿ ಗ್ರಾಮದ ಬೆಚ್ಚಳ್ಳಿ ಪ್ರದೇಶದಲ್ಲಿ ಸರ್ಕಾರಿ ಭೂಮಿಯಲ್ಲಿರುವ ನಡೆದಾಡುವ ದಾರಿ ಬಂದ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಜೆಸಿಬಿ ಬಳಸಿ ರಸ್ತೆ ತೆರವು ಮಾಡಿದ ಘಟನೆ ನಡೆದಿದೆ.

ಹೊಸಂಗಡಿ ಗ್ರಾಮದ ಬೆಚ್ಚಳ್ಳಿ ಪ್ರದೇಶದಲ್ಲಿರುವ ಸರ್ಕಾರಿ ಭೂಮಿಯಲ್ಲಿ, ಸಾರ್ವಜನಿಕರು ದೈನಂದಿನ ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದ ರಸ್ತೆಯ ಮೇಲೆಯೇ 2024ರಲ್ಲಿ ಬಿಬಿ ಪೂಜಾರಿ ಅಡಿಕೆ ಗಿಡಗಳನ್ನು ನೆಟ್ಟು ಅತಿಕ್ರಮಣ ಮಾಡಿದ್ದರು. ಇದರಿಂದ ಸ್ಥಳೀಯ ಬಡ ರೈತರಿಗೆ ಕೃಷಿ ಕಾರ್ಯ ನಡೆಸಲು ತೊಂದರೆ ಉಂಟಾಗಿ, ಎರಡು ವರ್ಷಗಳ ಕಾಲ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.

ಈ ಬಗ್ಗೆ ರೈತರು ಹಲವಾರು ಬಾರಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸಮರ್ಪಕ ಕ್ರಮ ಕೈಗೊಂಡಿರಲಿಲ್ಲ, ಕೆಲವರು ಭರವಸೆ ನೀಡಿದ ಹಿನ್ನಲೆಯಲ್ಲಿ ಸಮಸ್ಯೆ ಪರಿಹಾರವಾಗದೆ ರೈತರು ಸಂಕಷ್ಟ ಅನುಭವಿಸುವಂತಾಗಿತ್ತು. ಅನ್ಯಾಯಕ್ಕೊಳಗಾದ ರೈತರು ತಮ್ಮ ಸಮಸ್ಯೆಯನ್ನು ಮುಂದಿಟ್ಟುಕೊಂಡು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿ ಪ್ರತಿಭಟಿಸಿದ್ದಾರೆ.

ಈ ವೇಳೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ವಾರ್ಡ್ ಸದಸ್ಯರಾದ ಶಂಕರ ಶೆಟ್ಟಿ ನಳಾಲು, ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಂತಿ ನಾಯಕ್ ಅವರಿಗೆ ವಿಷಯ ಮನವರಿಕೆ ಮಾಡಲಾಯಿತು.

ಆದರೂ ಯಾವುದೆ ಕ್ರಮ ತೆಗೆದು ಕೊಳ್ಳದ ಹಿನ್ನಲೆಯಲ್ಲಿ ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ ಆನಂದ ಕಾರೂರು ಮುಂದೆ ಬಂದು, ಗ್ರಾಮ ಆಡಳಿತಾಧಿಕಾರಿ ಆನಂದ ಅವರ ಬಳಿ ಚರ್ಚಿಸಿದ ಬಳಿಕ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣ ಕ್ರಮ ಕೈಗೊಂಡರು. ಕಂದಾಯ ಅಧಿಕಾರಿ ರಾಘವೇಂದ್ರ ಹಾಗೂ ಗ್ರಾಮ ಸಹಾಯಕ ವಿಠೋಬ ಮಲ್ಯ ಅವರ ಸಮ್ಮುಖದಲ್ಲಿ ಸ್ಥಳಕ್ಕೆ ತೆರಳಿ ಜೆಸಿಬಿ ಬಳಸಿ ರಸ್ತೆ ಅತಿಕ್ರಮಣ ತೆರವುಗೊಳಿಸಲಾಯಿತು.



