ಉಡುಪಿ: ರಾಷ್ಟ್ರೀಯ ಹೆದ್ದಾರಿ 169ಎ ಪರ್ಕಳದ ಏರು ತಿರುವಿನಲ್ಲಿ ಹೊಂಡಗುಂಡಿಗಳ ಸಮಸ್ಯೆ ಪ್ರಯಾಣಿಕರ ತೀವ್ರ ಟೀಕೆಗೆ ಗುರಿಯಾಗಿದ್ದು, ತಕ್ಷಣ ಕಾರ್ಯಪ್ರವರ್ತರಾದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಪರ್ಕಳ ತಿರುವಿನಲ್ಲಿ ಖುದ್ದು ಹಾಜರಿದ್ದು ಮರು ಡಾಂಬರೀಕರಣಗೊಳಿಸಿದ್ದಾರೆ.

ಒಂದು ವಾರದಿಂದ ಕೆಳಪರ್ಕಳದಿಂದ ಏರು ತಿರುವಿನವರೆಗೆ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣಕ್ಕಿಳಿದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಿರು ಮಳೆ ನಡುವೆಯೂ ನಿನ್ನೆ ಡಾಂಬರೀಕರಣದ ಕಾಮಗಾರಿ ನಡೆಸುತ್ತಿರುವುದು ಕಂಡುಬಂತು.

ಸ್ಥಳೀಯ ನಗರಸಭಾ ಸದಸ್ಯೆ ಶ್ರೀಮತಿ ಸುಮಿತ್ರಾ ಆರ್. ನಾಯಕ್ ರವರ ಜೊತೆ ಭೇಟಿ ನೀಡಿದ ಸಂಸದ ಕೋಟ ಉಳಿದ ಕಾಮಗಾರಿಗಳನ್ನು ಕೂಡಲೇ ಮುಗಿಸುವಂತೆ ಸಲಹೆ ನೀಡಿದರು. ಪರ್ಕಳ ತಿರುವಿನಲ್ಲಿ ಏಕಮುಖದ ಸಂಚಾರಕ್ಕೆ ಅನುವು ಮಾಡಿಕೊಟ್ಟ ಪೋಲಿಸ್ ಇಲಾಖೆ, ವಾಹನಗಳಿಗೆ ಬದಲಿ ಮಾರ್ಗ ವ್ಯವಸ್ಥೆ ಕಲ್ಪಿಸಿತ್ತು.



