ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಷೇರು ಮಾರುಕಟ್ಟೆ ಸಂಬಂಧಿತ ರೀಲ್ಸ್ಗಳ ಮೂಲಕ ಲಾಭದ ಆಮಿಷವೊಡ್ಡಿ ಯುವಕನೊಬ್ಬನಿಂದ ಅಂದಾಜು 13.11 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಹೈಕಾಡಿ ನಿವಾಸಿ ವಿಶ್ವನಾಥ ಕುಲಾಲ (38) ವಂಚನೆಗೆ ಒಳಗಾದವರು.

ಫೇಸ್ ಬುಕ್ ನಲ್ಲಿ ಕಾಣಿಸಿಕೊಂಡ ಷೇರು ಮಾರುಕಟ್ಟೆ ರೀಲ್ಸ್ನ ಲಿಂಕ್ ಕ್ಲಿಕ್ ಮಾಡಿದ ಬಳಿಕ, ಅವರು ವಾಟ್ಸಪ್ ಗುಂಪಿಗೆ ಸೇರಿಸಲ್ಪಟ್ಟಿದ್ದಾರೆ. ನಂತರ ಎಸ್ಬಿಐಸಿಎಪಿ ಸೆಕ್ಯೂರಿಟೀಸ್ ಹೆಸರಿನ ಅಪ್ಲಿಕೇಶನ್ನಲ್ಲಿ ನೋಂದಣಿ ಮಾಡಿಸಿ, ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ.

ಮೊದಲು 9.19 ಲಕ್ಷ ರೂಪಾಯಿ ಹಾಗೂ ನಂತರ ಕಮೀಷನ್ ಹೆಸರಿನಲ್ಲಿ 3.92 ಲಕ್ಷ ರೂಪಾಯಿ ವರ್ಗಾಯಿಸಲಾಗಿದ್ದು, ಒಟ್ಟು 13,11,258 ರೂಪಾಯಿ ನಷ್ಟವಾಗಿದೆ. ಹಣ ವಾಪಸ್ ಸಿಗದೇ ಇದ್ದಾಗ ಮೋಸವಾಗಿರುವುದು ತಿಳಿದುಬಂದಿದೆ. ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸೈಬರ್ ವಂಚನೆ ಕುರಿತು ತನಿಖೆ ಕೈಗೊಂಡಿದ್ದಾರೆ.



