ಉಡುಪಿ: ಅಧಿಕಾರಶಾಹಿ ಮನಸ್ಥಿತಿ ವಿಶ್ವದಲ್ಲಿ ಯುದ್ಧ ಭೀತಿಯನ್ನು ಹೆಚ್ಚಿಸುತ್ತಿದ್ದು, ಅದರ ಪರಿಣಾಮವಾಗಿ ಮಕ್ಕಳು, ಯುವಕರು ಸೇರಿದಂತೆ ಸಾವಿರಾರು ಜನರು ಸಾವನ್ನಪ್ಪುತ್ತಿರುವುದು ಆತಂಕಕಾರಿ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರ ಹಾಗೂ ಸಾಮಾಜಿಕ ಕಾರ್ಯಕರ್ತ ರಾಮಾಂಜಿ ನಮ್ಮಭೂಮಿ ಹೇಳಿದರು.

ಶನಿವಾರ ಕುಂದಾಪುರದ ಶಾಸ್ತ್ರಿ ಸರ್ಕಲ್ನಲ್ಲಿ ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಹಮ್ಮಿಕೊಂಡಿದ್ದ ಎರಡನೇ ಹಂತದ ವಿಶ್ವಶಾಂತಿಗಾಗಿ ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯುದ್ಧದಿಂದ ಮಕ್ಕಳ ಮೇಲೆ ಉಂಟಾಗುತ್ತಿರುವ ಪರಿಣಾಮ ಗಂಭೀರವಾಗಿದ್ದು, ಶಾಂತಿ ಸ್ಥಾಪನೆಗಾಗಿ ಸಮಾಜದ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಪ್ರತಿಭಟನೆಗೂ ಮುನ್ನ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಯುದ್ಧದಲ್ಲಿ ಮೃತಪಟ್ಟವರಿಗೆ ಮೌನ ಶ್ರದ್ಧಾಂಜಲಿ ಸಲ್ಲಿಸಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರು ರಾಮಾಂಜಿಯವರ ನಿಲುವಿಗೆ ಬೆಂಬಲ ಸೂಚಿಸಿದರು.

ಪ್ರತಿಭಟನೆಯಲ್ಲಿ ವಿಶ್ವಶಾಂತಿಗಾಗಿ ಪ್ರಾರ್ಥಿಸೋಣ, ದಯೆಯೇ ಧರ್ಮದ ಮೂಲವಯ್ಯ, ಬಂದೂಕಿನ ನಳಿಗೆಗಳಲ್ಲಿ ಗುಬ್ಬಚ್ಚಿ ಗೂಡು ಕಟ್ಟಲಿ ಎಂಬ ಘೋಷಣೆಗಳು ಮೊಳಗಿದವು. ಮಣ್ಣಿನಿಂದ ನಿರ್ಮಿಸಿದ ಪುಟ್ಟ ಮಗುವಿನ ಪ್ರತಿಮೆಯು ಯುದ್ಧದ ಭೀಕರತೆಯನ್ನು ಪ್ರತಿಬಿಂಬಿಸಿ ಗಮನ ಸೆಳೆಯಿತು.



