ಉಡುಪಿ : ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗಿಡಗಂಟಿಗಳ ನಡುವೆ ಅಪರಿಚಿತ ವ್ಯಕ್ತಿಯ ಅಸ್ತಿಪಂಜರ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆಯೇ ವಿಶು ಶೆಟ್ಟಿ ಅವರು ಅಂಬಲಪಾಡಿ ಪೊಲೀಸ್ ಸಿಬ್ಬಂದಿಗಳ ಸಮಕ್ಷಮ, ರಾಮದಾಸ್ ಪಾಲನ್ ಉದ್ಯಾವರ ಅವರ ಸಹಕಾರದೊಂದಿಗೆ ಅಸ್ತಿಪಂಜರವನ್ನು ಸ್ಥಳೀಯ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು.

ಪೊಲೀಸರ ಪ್ರಾಥಮಿಕ ಅಂದಾಜು ಪ್ರಕಾರ, ವ್ಯಕ್ತಿ ಕೆಲವು ದಿನಗಳ ಹಿಂದೆ ಮೃತಪಟ್ಟಿರಬಹುದೆಂಬ ಸಾಧ್ಯತೆ ವ್ಯಕ್ತವಾಗಿದೆ. ಈ ಕುರಿತಂತೆ ವಿಶು ಶೆಟ್ಟಿ ನಗರ ಪೊಲೀಸ್ ಠಾಣೆಗೆ ಅಧಿಕೃತ ದೂರು ದಾಖಲಿಸಿದ್ದಾರೆ. ಘಟನಾ ಸ್ಥಳದಲ್ಲಿ ಪತ್ತೆಯಾದ ವ್ಯಕ್ತಿಯ ಪ್ಯಾಂಟ್ ಹಾಗೂ ಶರ್ಟ್ ಆಧರಿಸಿ, ಯಾರಾದರೂ ತಮ್ಮ ಕುಟುಂಬ ಸದಸ್ಯರು ಅಥವಾ ಪರಿಚಿತರ ಬಗ್ಗೆ ನಾಪತ್ತೆ ದೂರು ನೀಡಿರುವವರು ಇದ್ದಲ್ಲಿ ತಕ್ಷಣ ಉಡುಪಿ ನಗರ ಠಾಣೆಯನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.

ಮೃತ್ಯುವಿನ ನಿಖರ ಕಾರಣವು ಪೊಲೀಸ್ ತನಿಖೆ ಮತ್ತು ವೈದ್ಯಕೀಯ ಪರೀಕ್ಷೆಯ ನಂತರ ಮಾತ್ರ ಸ್ಪಷ್ಟವಾಗಲಿದೆ. ಈ ಘಟನೆ ಕುರಿತು ನಗರ ಠಾಣೆ ಹೆಚ್ಚಿನ ತನಿಖೆಯನ್ನು ಮುಂದುವರಿಸಿದೆ.



