ಉಡುಪಿ: ವಿಪರೀತ ಬಿಸಿಲಿನ ನಡುವೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಮಲ್ಪೆಯಿಂದ ಕರಾವಳಿ ಬೈಪಾಸ್ವರೆಗೆ ಸುಮಾರು 4 ಕಿ.ಮೀ ಕಾಲ್ನಡಿಗೆಯ ಮೂಲಕ ಸೋಮವಾರ ಬೆಳಗ್ಗೆ ಮಲ್ಪೆ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಕ್ರಿಯೆಗಳನ್ನು ವೀಕ್ಷಿಸಿದರು. ರಾಷ್ಟ್ರೀಯ ಹೆದ್ದಾರಿ 169 ಎ ನಲ್ಲಿ ಮಲ್ಪೆ – ಆಗುಂಬೆ ಚತುಷ್ಪತ ಕಾಮಗಾರಿ ಕಳೆದ ಕೆಲವು ಸಮಯದಿಂದ ಪ್ರಗತಿಯಲ್ಲಿದೆ. ಈ ರಸ್ತೆಯಲ್ಲಿ ಅಲ್ಲಲ್ಲಿ ಭೂಸ್ವಾದೀನ ಪ್ರಕ್ರಿಯೆಗಳಿಗೆ ಕೆಲವೊಂದು ಕಾರಣಗಳಿಂದ ತಡೆ ಬಿದ್ದಿದೆ. ಈ ಸಂಬಂಧ ಸಾರ್ವಜನಿಕರಿಂದಲೂ ಕಾಮಗಾರಿಗೆ ವೇಗ ನೀಡಲು ಒತ್ತಡ ಕೇಳಿಬರುತ್ತಿತ್ತು. ಜೊತೆಗೆ ಮಲ್ಪೆಯ ಮೀನುಗಾರಿಕಾ ಬಂದರಿಗೆ ತೆರಳುವವರಿಗೆ, ಪ್ರವಾಸಿಗರಿಗೆ ಸಾಕಷ್ಟು ತೊಂದರೆ ಉಂಟಾದ ಹಿನ್ನಲೆಯಲ್ಲಿ ಸಂಸದ ಕೋಟ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.

ಬಳಿಕ ಮಾತನಾಡಿದ ಅವರು, ಮಲ್ಪೆಯಿಂದ ಕರಾವಳಿ ಬೈಪಾಸ್ ರಸ್ತೆಯಲ್ಲಿ ಸುಮಾರು 500 ಮೀ ಅಗಲೀಕರಣ ಕಾಮಗಾರಿ ಪೂರ್ಣಗೊಂಡಿದೆ. 227 ಪ್ರಕರಣ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಒಳಪಟ್ಟಿದೆ. ಅದರಲ್ಲಿ 133 ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. 25 ಪ್ರಕರಣಗಳಿಗೆ ಈ ವಾರದ ಶುಕ್ರವಾರದೊಳಗೆ ಪರಿಹಾರ ನೀಡಲಾಗುವುದು, ಸುಮಾರು 40 ಪ್ರಕರಣಗಳು ಮಹಜರು ನಡೆಸಲಾಗಿದ್ದು, ನೋಟಿಸ್ ನೀಡುವ ಪ್ರಕ್ರಿಯೆ ನಡೆಯಲಿದೆ ಎಂದರು.
ಮಾ.4 (ಇಂದು) ಮಲ್ಪೆಯ ಮೊಗವೀರ ಸಭಾಭವನದಿಂದ ಕಲ್ಮಾಡಿವರೆಗೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಕಡೆಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸುವಂತೆ ಗುತ್ತಿಗೆದಾರರು ಹಾಗು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎಲ್ಲಿಯಾದರೂ ಸಮಸ್ಯೆ ಉಂಟಾದಲ್ಲಿ ಕಾನೂನು ಪ್ರಕಾರ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು. ಪ್ರಸ್ತುತ ಈ ಪರಿಸರದಲ್ಲಿ ಪ್ರತಿ ಸೆಂಟ್ಸ್ಗೆ 7 ರಿಂದ 8 ಲಕ್ಷ ರೂವರೆಗೆ ಬೆಳೆ ಬಾಳುತ್ತಿದೆ. ಸರಕಾರ ನಿಗದಿ ಪಡಿಸಿದ 1 ಲಕ್ಷ ರೂ ಪರಿಹಾರವನ್ನು ಹೇಗೆ ಪಡೆದುಕೊಳ್ಳುವ ಬಗ್ಗೆ ಭೂ ಮಾಲಕರು ಅವಲತ್ತುಕೊಂಡು, ಗರಿಷ್ಠ ಪರಿಹಾರ ದೊರಕಿಸಿಕೊಡಬೇಕು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅವರು, ಈ ಬಗ್ಗೆ ಜಿಲ್ಲಾಧಿಕಾರಿಯವರ ಮೂಲಕ ಸರಕಾರಕ್ಕೆ ಮೇಲ್ಮನವಿ ಸಲ್ಲಿಸಿ, ಹೆಚ್ಚಿನ ಪರಿಹಾರ ದೊರಕಿಸಿಕೊಡಲು ನಾನು ಮತ್ತು ಶಾಸಕ ಯಶ್ಪಾಲ್ ಸುವರ್ಣ ಪ್ರಯತ್ನಿಸುತ್ತೇವೆ. ಇದಕ್ಕೆ 99% ಭೂ ಮಾಲೀಕರು ಒಪ್ಪಿಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಉಪವಿಭಾಗಧಿಕಾರಿ ಮಹೇಶ್ಚಂದ್ರ, ರಾಷ್ಟ್ರೀಯ ಹೆದ್ದರಿ ಇಲಾಖೆಯ ಇಂಜಿನಿಯರ್, ಗುತ್ತಿಗೆದಾರ, ಪೋಲಿಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.