ಉಡುಪಿ: ಬಿಜೆಪಿ ವಿಪಕ್ಷ ನಾಯಕ ಆರ್. ಅಶೋಕ್ ಅವರು ಉಡುಪಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ಪತ್ತೆ ಮಾಡಿದ ಕಾರ್ಯಾಚರಣೆಗಳನ್ನು ಉಲ್ಲೇಖಿಸಿದ ಅವರು, ರಾಜ್ಯವನ್ನು ಡ್ರಗ್ ಮಾಫಿಯಾ ಸುತ್ತುವರೆದಿದ್ದು, ಸರ್ಕಾರ ಇದನ್ನು ತಡೆಯಲು ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಅವರು ಉಡುಪಿಯ ಕಾಪು ನಲ್ಲಿ ಮಾತನಾಡುತ್ತಾ, ಹೊಸ ವರ್ಷ ಆಚರಣೆಯ ಬದಲು ರಾಜ್ಯದಲ್ಲಿ ‘ಡ್ರಗ್ಸ್ ಸೆಲೆಬ್ರೇಶನ್’ ನಡೆಯುತ್ತಿದೆ ಎಂದು ಕಿಡಿಕಾರಿದ ಅಶೋಕ್, ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿರುವುದನ್ನು ಉದಾಹರಿಸಿ. ಈ ಬೆಳವಣಿಗೆಗಳು ನಮ್ಮ ಪೊಲೀಸರಿಗೆ ಏಕೆ ಗೊತ್ತಾಗಿಲ್ಲ? ಇದಕ್ಕಿಂತ ಅವಮಾನ ಇನ್ನೇನಿದೆ? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಇಂಟೆಲಿಜೆನ್ಸ್ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಜೈಲುಗಳಲ್ಲಿ ಡ್ರಗ್ ಪೆಡ್ಲರ್ಗಳಿಗೆ ಐದು ನಕ್ಷತ್ರ ಸೌಲಭ್ಯಗಳು ಸಿಗುತ್ತಿವೆ, ಜೈಲುಗಳು ಹಣ ವಸೂಲಿ ಕೇಂದ್ರಗಳಾಗಿ ಮಾರ್ಪಟ್ಟಿವೆ ಎಂದು ಗಂಭೀರ ಆರೋಪ ಮಾಡಿದರು. “ತಿದಿನ ಒಬ್ಬ ಕಾನ್ಸ್ಟೇಬಲ್ ಒಂದು ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾನೆ ಎಂಬ ಆರೋಪವೂ ಮಾಡಿದರು. ಗೃಹ ಸಚಿವರು ಕಾಣೆಯಾಗಿದ್ದಾರೆ, ಯಾವುದೇ ಪ್ರಶ್ನೆ ಕೇಳಿದರೂ ‘ವರದಿ ಬಂದಿಲ್ಲ’ ಎಂಬ ಉತ್ತರ ಮಾತ್ರ ಸಿಗುತ್ತಿದೆ ಎಂದು ಟೀಕಿಸಿದರು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಗಲಾಟೆಯಲ್ಲಿ ಮುಳುಗಿದ್ದಾರೆ ಎಂದೂ ಹೇಳಿದರು. ರಾಜ್ಯಕ್ಕೆ 500ರಿಂದ 600 ಕೋಟಿ ರೂ. ಮೌಲ್ಯದ ಡ್ರಗ್ಸ್ ಪ್ರವೇಶಿಸಿದೆ, ಡ್ರಗ್ಸ್ ಹಂಚಿಕೆಯಲ್ಲಿ ಕೆಲ ಪೊಲೀಸರು ಕೂಡ ಶಾಮಿಲಾಗಿದ್ದಾರೆ ಎಂದು ಆರೋಪಿಸಿದ ಅಶೋಕ್, ಸರ್ಕಾರಕ್ಕೆ ಇದನ್ನು ನಿಯಂತ್ರಿಸುವ ಧಮ್ ಮತ್ತು ತಾಕತ್ತು ಇಲ್ಲ ಎಂದು ಕಿಡಿಕಾರಿದರು.

ಇನ್ನು ಬಿಜೆಪಿ–ಜೆಡಿಎಸ್ ಮೈತ್ರಿ ಕುರಿತು ಮಾತನಾಡಿದ ಅವರು, ನಾವು ಎನ್ಡಿಎ ಪಾಲುದಾರರು. ನಮ್ಮ ನಡುವೆ ಯಾವುದೇ ಗೊಂದಲವಿಲ್ಲ. ಮುಂದಿನ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.



