ಉಡುಪಿ : ಸಂಘಟನೆ ಎಂದರೆ ಏನು, ಎತ್ತ ಸಾಗಬೇಕು ಎಂಬುದನ್ನು ಕೊಡವೂರಿನ ಸುಮನಸಾ ಸಾಂಸ್ಕೃತಿಕ ಸಂಘಟನೆಯಿಂದ ಕಲಿಯಬೇಕು. ಯಾವುದೇ ಸಂಘಟನೆ ಅದರ ಸದಸ್ಯರ ಒಗ್ಗಟ್ಟು, ತನು–ಮನ–ಧನ ಸಮರ್ಪಣೆ ಹಾಗೂ ಪ್ರೇಕ್ಷಕರ ಪ್ರೋತ್ಸಾಹದಿಂದ ಮಾತ್ರ ಬೆಳೆಯುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಉಡುಪಿ ಅಜ್ಜರಕಾಡಿನ ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ಕೊಡವೂರಿನ ಸುಮನಸಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಹಮ್ಮಿಕೊಂಡ ರಂಗಹಬ್ಬ-14 ನಾಟಕೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ ಮಾತನಾಡಿ, ನಾಟಕವು ಕೇವಲ ಮನರಂಜನೆ ಅಲ್ಲ; ಅದು ನಮ್ಮ ಬದುಕಿನ ದುಃಖ–ಸುಖ, ಕಷ್ಟ–ಸಂಕಷ್ಟ, ಪ್ರೀತಿ–ವಿರಹಗಳನ್ನು ಬಿಂಬಿಸುವ ಜೀವಂತ ವೇದಿಕೆ ಎಂದರು. ನಗರಸಭೆಯ ಮಾಜಿ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್ ಹಾಗೂ ಡೆಂಟಿಸ್ಟ್ ಡಾ. ವಿಜಯೇಂದ್ರ ವಸಂತ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯಕ್ಷಗುರು ನಿತ್ಯಾನಂದ ಶೆಟ್ಟಿಗಾರ್ ಅವರಿಗೆ ‘ರಂಗ ಸಾಧಕ’ ಗೌರವಾರ್ಪಣೆ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಸಹಕಾರಿ ಧುರೀಣ ಬಿ.ಜಿ. ಸುಬ್ಬರಾವ್, ಮಲ್ಪೆಯ ಉದ್ಯಮಿ ಅಭಿನಂದನ್ ಕೆ. ಕೋಟ್ಯಾನ್, ಸುಮನಸಾ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿದ್ದು ಉಚ್ಚಿಲ್ ಸ್ವಾಗತಿಸಿ, ರಾಗಿಣಿ ಹರೀಶ್ ವಂದಿಸಿದರು. ಕಾರ್ತಿಕ್ ಪ್ರಭು ಹಾಗೂ ಸೌಭಾಗ್ಯ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.



