ಉಡುಪಿ : ಜೂನ್ ೨ರ ಮುಂಗಾರು ಮಳೆಯ ನಿರೀಕ್ಷೆಯಲ್ಲಿದ್ದ ಉಡುಪಿ ಜನತೆಗೆ ಮುಂಚಿತವಾಗಿ ಅಬ್ಬರಿಸಿದ ಮಳೆ ಕಂಗಾಲಾಗುವಂತೆ ಮಾಡಿದೆ. ಮುಖ್ಯವಾಗಿ ಉಡುಪಿ ನಗರ ವ್ಯಾಪ್ತಿಯಲ್ಲಿ ಒಳಚರಂಡಿಯ ಅವ್ಯವಸ್ಥೆಯ ಹಿನ್ನಲೆಯಲ್ಲಿ ಸರಿಯಾಗಿ ನೀರು ಹರಿಯದೆ ಜನ ಸಾಮಾನ್ಯರು ಸಂಕಷ್ಟ ಪಡುವಂತಾಯಿತು. ಅದರಲ್ಲೂ ಮುಖ್ಯವಾಗಿ ಉಡುಪಿ ಮಣಿಪಾಲ ಸಂಪರ್ಕ ರಸ್ತೆ ರಾಷ್ಟ್ರೀಯ ಹೆದ್ದಾರಿ 169 ಎ ಸಂಪೂರ್ಣ ಮಳೆ ನೀರಿನಿಂದ ತುಂಬಿ ಹೋಗಿದೆ. ಮಣಿಪಾಲದ ಎತ್ತರ ಪ್ರದೇಶದಲ್ಲಿರುವ ಕಸ ಕಡ್ಡಿ ಮಣ್ಣು ಕಲ್ಲು, ರಾಷ್ಟ್ರೀಯ ಹೆದ್ದಾರಿ 169 ಎ ಮೇಲೆ ಮಳೆಯ ನೀರಿನ ಜೊತೆ ಕೊಚ್ಚಿಕೊಂಡು ಬಂದು ಅವಾಂತರವನ್ನೆ ಸೃಷ್ಠಿ ಮಾಡಿತ್ತು.
ಉಡುಪಿ ನಗರ ಸಭೆ ಪ್ರತಿಬಾರಿಯೂ ಮಳೆಗಾಲದಲ್ಲಿ ಅಸಮರ್ಪಕ ರಾಜಕಾಲುವೆ ನಿರ್ವಹಣೆ, ಕಳಪೆ ಒಳ ಚರಂಡಿ ವ್ಯವಸ್ಥೇ ಹಿನ್ನಲೆಯಲ್ಲಿ ಸಾಕಷ್ಟು ದೂರುಗಳನ್ನು ಕೇಳುತ್ತಾ ಬಂದಿದೆ. ಕಳೆದ ಬಾರಿ ಗುಂಡಿಬೈಲು ಪರಿಸರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮಾಡಲಾದ ಅವಾಂತರದಿಂದಾಗಿ ಕೃತಕ ನೆರೆ ಸೃಷ್ಟಿಯಾಗಿ ನಗರವಾಸಿಗಳು ಸಂಕಷ್ಟ ಪಡುವಂತಾಗಿದ್ದರು ಕೂಡ ನಗರ ಸಭೆ ಇದುವರೆಗೂ ಎಚ್ಚೇತ್ತು ಕೊಂಡಹಾಗೆ ಕಾಣಿತ್ತಿಲ್ಲ. ಪ್ರತಿ ವರ್ಷ ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಏರಿಯಾ ಸಣ್ಣ ಸಣ್ಣ ಮಳೆಗೆ ಮುಳುಗಡೆಯಾಗುತ್ತ ಬಂದಿದ್ದರು ಇದುವರೆಗೂ ನಗರ ಸಭೆಯ ಸೂಕ್ತ ವ್ಯವಸ್ಥೆಗೆ ಮನಸ್ಸು ಮಾಡಿಲ್ಲ. ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಬರುವ ಸ್ಥಳದಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆಯೂ ಇಲ್ಲದೆ ಪ್ರತಿ ಮಳೆಗಾಲದಲ್ಲೂ ಹೊರಭಾಗದಿಂದ ಬರುವ ಭಕ್ತರು ಇಲ್ಲಿ ಕಳಪೆ ವ್ಯವಸ್ಥೆಗೆ ಶಪಿಸಿ ಹೋಗುತ್ತಿದ್ದಾರೆ. ಇನ್ನು ನಿಟ್ಟೂರು ಭಾಗದಲ್ಲಿ, ಮಳೆ ಬಂದರೆ ಸಾಕು ಇಲ್ಲಿ ನೆರೆಯ ವಾತಾವರಣ ಮಾಮೂಲು. ಉಡುಪಿಯ ಬಹುತೇಕ ಎಲ್ಲಾ ಲಾಡ್ಜ್, ಹೋಟೆಲ್ ಗಳ ಕೊಳಚೆ ನೀರು ಸೇರುವ ಜಾಗ ಎನ್ನುವಂತೆ ಈ ಸ್ಥಳವಾಗಿ ಮಾರ್ಪಾಡಾಗಿದೆ. ಇಲ್ಲಿನ ರಾಜಕಾಲುವೆ ಗೆ ಸರಿಯಾದ ಬದಿಕಟ್ಟು ಇಲ್ಲದೆ ಇರುವ ಹಿನ್ನಲೆಯಲ್ಲಿ ತಗ್ಗು ಪ್ರದೇಶಗಳಿಗೆ ನಗರದ ನೀರು ನುಗ್ಗಿ ವರ್ಷ ವರ್ಷವು ಅವಾಂತರ ಸೃಷ್ಟಿ ಮಾಡುತ್ತಿದೆ. ಇನ್ನು ನಗರದ ಒಳಭಾಗದಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೆ ಇರುವ ಹಿನ್ನಲೆಯಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಉಡುಪಿ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುವುದು ಮಾಮೂಲಿಯಂತಾಗಿದೆ.
ಈ ಬಾರಿ ಮಳೆಯ ಅಬ್ಬರಕ್ಕೆ ಮಣಿಪಾಲ ನಗರ ಕಂಗಾಲಾಗುವಂತೆ ಮಾಡಿದೆ. ಉಡುಪಿಯಿಂದ ಎತ್ತರ ಸ್ಥಳದಲ್ಲಿರುವ ಮಣಿಪಾಲ ನಗರದಲ್ಲಿ ಅಭಿವೃದ್ದಿ ಹೆಸರಿನಲ್ಲಿ ಸಾಕಷ್ಟು ವಾಣಿಜ್ಯ ಕಟ್ಟಡಗಳ ನಿರ್ಮಾಣವಾಗಿದೆ. ಗುಡ್ಡ ಇಳಿಜಾರಿನಲ್ಲೂ ಕೂಡ ಕಟ್ಟಡಗಳ ನಿರ್ಮಾಣವಾಗಿರುವ ಮಣಿಪಾಲದಲ್ಲಿ ಇಂದು ಸುರಿದ ಮಳೆ ಮಣಿಪಾಲವಾಸಿಗಳಿ ಭಯ ಹುಟ್ಟಿಸಿದೆ. ಉಡುಪಿ ಮಣಿಪಾಲ ಸಂಪರ್ಕ ರಾಜ್ಯ ಹೆದ್ದಾರಿ ಮೂರು ಗಂಟೆಗಳ ನಿರಂತರ ಸುರಿದ ಮಳೆಯಿಂದಾಗಿ ಬಹುತೇಕ ಬಂದ್ ಆಗುವ ಸ್ಥಿತಿಗೆ ತಲುಪಿತ್ತು. ಉಡುಪಿ -ಮಣಿಪಾಲ ರಾಷ್ಟ್ರೀಯ ಹೆದ್ದಾರಿ 169 ಎ ರಲ್ಲಿ ಮಣಿಪಾಲ ಐನಾಕ್ಸ್ನಿಂದ ಸಿಂಡಿಕೇಟ್ ಸರ್ಕಲ್ ಮಧ್ಯೆ ಸಿಗುವ ರಸ್ತೆಯ ಬದಿ ತುಂಬಿಸಲಾದ ಮಣ್ಣು ಭಾರೀ ಮಳೆಯಿಂದ ಕಿತ್ತು ಬಂದಿದೆ. ಇದರಿಂದ ರಸ್ತೆ ಬದಿ ಬೃಹತ್ ಅಪಾಯಕಾರಿ ತೋಡು ಸೃಷ್ಠಿಯಾಗಿದೆ. ಹೆದ್ದಾರಿಯ ಮೇಲೆ ಕಲ್ಲು ಮಣ್ಣು ಹರಿದು ಬಂದು ರಸ್ತೆ ತಡೆ ಉಂಟಾಯಿತು. ಮುಂಜಾನೆ ಕೆಲಸ ತೆರಳುವವರು ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಮಣಿಪಾಲದ ಖಾಸಗಿ ಆಸ್ಪತ್ರೆ ತೆರಳುವವರು ಮಳೆಯ ಸೃಷಿಸಿದ ಅವಾಂತರದಿಂದ ಕಂಗೆಡುವಂತಹ ಸ್ಥಿತಿ ನಿರ್ಮಾಣವಾಗಿತು. ಲಕ್ಷ್ಮೀಂದ್ರ ನಗರದ ಬಳಿಕ ಭಾರಿ ಪ್ರಮಾಣದ ಕಲ್ಲು ಮಣ್ಣು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಬಂದು ರಾಷ್ಟ್ರೀಯ ಹೆದ್ದಾರಿ 169 ಎ ಯಲ್ಲಿ ಬಿದ್ದ ಕಾರಣ ವಾಹನ ಸಂಚಾರವೇ ಬಂದ್ ಮಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಬಳಿಕ ಪರ್ಯಾಯ ಸಂಚಾರಿ ವ್ಯವಸ್ಥೆ ಕಲ್ಪಿಸಿದ ನಂತರ ರಸ್ತೆ ತೆರವು ಕಾರ್ಯ ನಡೆಸಲಾಯಿತು. ಇನ್ನು ಲಕ್ಷ್ಮೀಂದ್ರ ನಗರದಲ್ಲಿ ಕೆಳ ಅಂತಸ್ತಿನಲ್ಲಿರುವ ಅಂಗಡಿ ಕೋಣೆಗಳು, ಕಟ್ಟಡಗಳಿಗೆ ಮಳೆಯ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿದೆ. ಒಟ್ಟಾರೆಯಾಗಿ ಬಿಸಿಲಿನಿಂದ ಕಂಗೆಟ್ಟ ಉಡುಪಿ ಜನತೆ ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಬಾಣಲೆಯಿಂದ ತಪ್ಪಿ ಬೆಂಕಿಗೆ ಬಿದ್ದಂತೆ ಆಗಿದೆ. ಅಸಮರ್ಪಕ ಒಳಚರಂಡಿ ವ್ಯವಸ್ಥೆ ಅಪೂರ್ಣವಾದ ಕಾಮಗಾರಿ ನಡೆಯುತ್ತಿರುವ ವೇಳೆಯಲ್ಲಿಯೇ ಚಂಡಮಾರುತದ ಎಫೆಕ್ಟ್ ನಿಂದಾಗಿ ಮಳೆ ಸುರಿದು ಉಡುಪಿ ಜನ ಜೀವನ ಒಂದೇ ದಿನಕ್ಕೆ ಅಸ್ತವ್ಯಸ್ತವಾಗಿದೆ.

ಜೂನ್ 2 ರ ನಂತರ ಮುಂಗಾರು ಪ್ರವೇಶ ಎಂಬ ಲೆಕ್ಕಾಚಾರ ಇತ್ತು, ನಗರ ಭಾಗದಲ್ಲಿ ಹೂಳೆತ್ತುವ ಕಾರ್ಯಗಳು ನಡೆಯುತ್ತಿತ್ತು, ರಾಜ ಕಾಲುವೆ ಸೇರಿದಂತೆ ಎಲ್ಲಾ ನೀರು ಹರಿಯುವ ಕಾಲುವೆಗಳ ಹೂಳೆತ್ತಲಾಗುತ್ತಿದೆ. ಚಂಡಮಾರುತದಿಂದ ಭಾರಿ ಮಳೆ ಸುರಿದಿದೆ, ನಗರದ ಅಲ್ಲಲ್ಲಿ ಕೃತಕ ನೆರೆ ಕಾಣಿಸಿಕೊಂಡಿದೆ. ಕೆಲವು ಕಟ್ಟಡಗಳು ರಸ್ತೆ ಮೇಲೆ ನಿರ್ಮಾಣ ಆಗಿದೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಿಯಾಗಿ ಒಳಚರಂಡಿ ವ್ಯವಸ್ಥೆ ಆಗಿಲ್ಲ. ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆಗಳಿಲ್ಲದೆ ಸಮಸ್ಯೆ ಆಗಿದೆ, ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ದಯೆದಾಕ್ಷಿಣ್ಯವಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು. ದೊಡ್ಡ ದೊಡ್ಡ ಬಿಲ್ಡರ್ಗಳು ನೀರು ಹರಿಯುವ ಕಾಲುವೆಯನ್ನು ಅತಿಕ್ರಮಣ ಮಾಡಿದ್ದಾರೆ, ಹೈವೇ ಕಾಮಗಾರಿ ಸಂದರ್ಭ ಅಲ್ಲಲ್ಲಿ ಒಳಚರಂಡಿ ವ್ಯವಸ್ಥೆಗಳು ಆಗಿಲ್ಲ, ಹತ್ತು ಫೀಟ್ ಕಾಲುವೆಗಳು 5 ಫೀಟ್ ಆಗಿವೆ, ಯಾವುದೇ ಕಾರಣಕ್ಕೂ ರಾಜಿ ಮಾಡದೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ನೋಟಿಸ್ ನೀಡುವ ಅಗತ್ಯ ಇಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಯಶ್ಪಾಲ್ ಸುವರ್ಣ (ಶಾಸಕರು, ಉಡುಪಿ)