ಉಡುಪಿ : ಆದಿ ಉಡುಪಿಯ ಕಂಬಳಕಟ್ಟೆ ಪ್ರದೇಶದಲ್ಲಿ ಬಾವಿಗೆ ಬಿದ್ದ ವೃದ್ಧರು ಮೂರು ದಿನಗಳ ಕಾಲ ಜೀವ ಉಳಿಸಿಕೊಳ್ಳಲು ಹೋರಾಡಿ ಕೊನೆಗೂ ಗ್ಯಾಸ್ ಓಟಿಪಿ ಹಿನ್ನಲೆಯಲ್ಲಿ ರಕ್ಷಿಸಲ್ಪಟ್ಟ ಘಟನೆ ನಡೆದಿದೆ. ಕೊಡವೂರು ಕಂಬಳಕಟ್ಟಯ ನಿವಾಸಿ ಶ್ರೀನಿವಾಸ ಆಚಾರ್ಯ (62) ಅವರು ಮನೆಯ ಸಮೀಪದ 20 ಅಡಿ ಆಳದ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದರು. ಪಂಪ್ಗೆ ಜೋಡಿಸಿದ್ದ ಪೈಪ್ಗೆ ಕಟ್ಟಿದ್ದ ಹಗ್ಗವನ್ನು ಎಳೆಯುವ ವೇಳೆ ಅದು ತುಂಡಾಗಿ, ಅವರು ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿದ್ದಾರೆ.

ಬಾವಿಯೊಳಗೆ ನೀರಿನ ಮಧ್ಯೆ ಸಿಲುಕಿಕೊಂಡಿದ್ದ ಅವರು, ಪೈಪ್ ಹಾಗೂ ಹಗ್ಗವನ್ನು ಹಿಡಿದುಕೊಂಡೇ ಜೀವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಸಹಾಯಕ್ಕಾಗಿ ಕೂಗಿದರೂ, ಅವರ ಧ್ವನಿ ಹೊರಗೆ ಕೇಳಿಸದ ಕಾರಣ ಮೂರು ದಿನಗಳ ಕಾಲ ಯಾರಿಗೂ ವಿಷಯ ತಿಳಿದು ಬಂದಿಲ್ಲ. ಪರಿಚಿತನೊರ್ವರು ಗ್ಯಾಸ್ ನೀಡುವುದಾಗಿ ಹೇಳಿದ್ದ ಶ್ರೀನಿವಾಸ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಅನುಮಾನಗೊಂಡ ಅವರು ವಿಚಾರಣೆ ನಡೆಸಿದರು. ಬಳಿಕ ಸ್ಥಳೀಯರು ಮನೆ ಸುತ್ತಮುತ್ತ ಪರಿಶೀಲಿಸಿದಾಗ ಬಾವಿಯೊಳಗೆ ನೋಡಿದಾಗ ಶ್ರೀನಿವಾಸ ಅವರು ನಿತ್ರಾಣಗೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ


ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಬಾವಿಯೊಳಗೆ ಇಳಿದ ತಂಡವು ವೃದ್ಧರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ದರು. ಪ್ರಸ್ತುತ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಅಗ್ನಿಶಾಮಕ ದಳದ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.



