ಉಡುಪಿ: ಮನೆಗೆ ತೆರಳುವ ದಾರಿ ವಿಚಾರವಾಗಿ ನೆರೆಮನೆಯವರೊಂದಿಗೆ ಉಂಟಾದ ವಿವಾದದಲ್ಲಿ ಮಹಿಳೆ ಹಾಗೂ ಆಕೆಯ ಪುತ್ರನಿಗೆ ತಡೆದು ನಿಲ್ಲಿಸಿ ಬೆದರಿಕೆ ಹಾಕಿದ ಆರೋಪದ ಮೇಲೆ ನಾಲ್ವರ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾಪು ತಾಲೂಕಿನ ಪಡು ಗ್ರಾಮದ ಶಕುಂತಳಾ ಎಸ್. ಪುತ್ರನ್ (67) ಅವರು ಪ್ರಸ್ತುತ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ರೋಡ್ನಲ್ಲಿ ವಾಸಿಸುತ್ತಿದ್ದು, ಪಡು ಗ್ರಾಮದಲ್ಲಿ ಮನೆ ಹಾಗೂ ಜಮೀನು ಹೊಂದಿದ್ದಾರೆ. ವರ್ಷಕ್ಕೆ 5-6 ಬಾರಿ ಗ್ರಾಮಕ್ಕೆ ಬಂದು ಮನೆ ಮತ್ತು ಜಮೀನನ್ನು ಸ್ವಚ್ಛಗೊಳಿಸಿ ಹೋಗುತ್ತಿರುತ್ತಾರೆ. ಮನೆಗೆ ತೆರಳಲು ಪುರಸಭೆ ರಸ್ತೆಯ ಬಳಿಕ ರತ್ನಾಕರ ಕರ್ಕೇರ ಅವರ ಜಾಗದ ಮೂಲಕ ಮತ್ತೊಂದು ರಸ್ತೆ ಸಂಪರ್ಕವಿದೆ. ನೆರೆಮನೆಯವರಾದ ರಾಘು ಕೋಟ್ಯಾನ್, ವಸಂತಿ ಕೋಟ್ಯಾನ್, ಧನ್ಯ ಕೋಟ್ಯಾನ್ ಹಾಗೂ ದಮಯಂತಿ ಕೂಡ ಇದೇ ರಸ್ತೆಯನ್ನು ಬಳಸುತ್ತಿದ್ದಾರೆ ಎನ್ನಲಾಗಿದೆ.

2025ರ ಏ.13ರಂದು ಬೆಳಗ್ಗೆ 9.30ರ ಸುಮಾರಿಗೆ ಶಕುಂತಳಾ ಹಾಗೂ ಅವರ ಪುತ್ರ ನೀರಜ್ ಮನೆಗೆ ತೆರಳುತ್ತಿದ್ದಾಗ ಆರೋಪಿಗಳು ದಾರಿ ತಡೆದು, ಈ ಜಾಗದ ಮೂಲಕ ಮನೆಗೆ ಹೋಗಬಾರದು ಎಂದು ಹೇಳಿ ಜಗಳ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮತ್ತೆ ಏ.18ರಂದು ಸಂಜೆ 3.12ರ ಸುಮಾರಿಗೆ ಶಕುಂತಳಾ ಹಾಗೂ ನೀರಜ್ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದಾಗ ಆರೋಪಿಗಳು ರಿಕ್ಷಾವನ್ನು ತಡೆದು ನಿಲ್ಲಿಸಿ, ಶಕುಂತಳಾ ಅವರನ್ನು ಬಲವಂತವಾಗಿ ಕೆಳಗಿಳಿಸಿ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಈ ವೇಳೆ ತಡೆಯಲು ಬಂದ ನೀರಜ್ ಅವರ ಶರ್ಟ್ ಹಿಡಿದ ರಾಘು ಕೋಟ್ಯಾನ್ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಭಯಗೊಂಡ ಶಕುಂತಳಾ ಮನೆಗೆ ಓಡಿ ಹೋಗಿ ಒಳಗೆ ಬಾಗಿಲು ಹಾಕಿಕೊಂಡಾಗ, ವಸಂತಿ ಕೋಟ್ಯಾನ್, ಧನ್ಯ ಕೋಟ್ಯಾನ್ ಹಾಗೂ ದಮಯಂತಿ ಕಲ್ಲು ಎಸೆಯಲು ಮುಂದಾಗಿದ್ದು, ಬಳಿಕ ಆರೋಪಿಗಳು ಮನೆಗೆ ಕಲ್ಲು ಹಾಗೂ ಬಿಯರ್ ಬಾಟಲಿ ಎಸೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನ್ಯಾಯಾಲಯಕ್ಕೆ ಸಲ್ಲಿಸಲಾದ ಖಾಸಗಿ ದೂರಿನ ಆಧಾರದ ಮೇಲೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


