ಉಡುಪಿ : ಬೈಕ್ ಸ್ಕಿಡ್ ಆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಮಣಿಪಾಲದ ಲಕ್ಷ್ಮೀನಗರದ ಬಳಿ ಜ.9ರ ಶುಕ್ರವಾರ ತಡರಾತ್ರಿ ನಡೆದಿದೆ. ಇಂದಿರಾನಗರದ ಬುಡ್ನಾರ್ ನಿವಾಸಿ ಪ್ರವೀಣ್ ಶೆಟ್ಟಿ (36) ಮೃತ ದುರ್ದೈವಿ.

ಪ್ರವೀಣ್ ಶೆಟ್ಟಿ ಅವರು ಬೈಕ್ನಲ್ಲಿ ಉಡುಪಿಯಿಂದ ಮಣಿಪಾಲದತ್ತ ತೆರಳುತ್ತಿದ್ದ ವೇಳೆ, ಲಕ್ಷ್ಮೀನಗರ ಸಮೀಪ ವಾಹನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದ ಪ್ರವೀಣ್, ಸುಮಾರು ಒಂದೂವರೆ ವರ್ಷದ ಹಿಂದಷ್ಟೇ ವಿವಾಹವಾಗಿದ್ದರು. ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



