ಉಡುಪಿ: ಹಾಡಿಯಲ್ಲಿ ಬೇಟೆಗೆ ತೆರಳಿದ ವೇಳೆ ಬಂದೂಕಿನಿಂದ ಗುಂಡು ಹಾರಿ ಕಾರು ಮತ್ತು ಮನೆಗೆ ಬಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಹಿರಿಯಡ್ಕ ಪೊಲೀಸ್ ರು ಬಂಧಿಸಿದ್ದಾರೆ. ಕುದಿ ಗ್ರಾಮದ ಕೊಂಡಾಡಿಯ ಪ್ರದೀಪ್ (32) ಹಾಗೂ ಹಿರಿಯಡ್ಕ ಗುಡ್ಡೆಯಂಗಡಿಯ ಮನೋಜ್ (25) ಬಂಧಿತ ಆರೋಪಿಗಳು.

ಸೆಪ್ಟೆಂಬರ್ 1ರಂದು ನಸುಕಿನ ವೇಳೆ ಕಣಜಾರು ಗುರುರಾಜ್ ಮಂಜಿತ್ತಾಯರವರ ಮನೆಯ ಸಮೀಪದ ಹಾಡಿಯಲ್ಲಿ ಬೇಟೆ ಶಿಕಾರಿ ನಡೆಸುತ್ತಿದ್ದ ಅಪರಿಚಿತರ ಬಂದೂಕಿನಿಂದ ಗುಂಡು ಹಾರಿತ್ತು. ಗುಂಡು ಗುರುರಾಜ್ ಎಂಬವರ ಮನೆಯ ಎದುರು ನಿಲ್ಲಿಸಿದ್ದ ಕಾರಿನ ಗಾಜಿಗೆ ತಾಗಿ ನಂತರ ಮರದ ಬಾಗಿಲಿಗೆ ಬಡಿದಿತ್ತು.

ಈ ಕುರಿತು ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸ್ ರು ಆರೋಪಿಗಳನ್ನು ವಶಕ್ಕೆ ಪಡೆದು, ಬಂಧಿತರಿಂದ 50 ಸಾವಿರ ರೂ. ಮೌಲ್ಯದ ಪರವಾನಿಗೆರಹಿತ ತೋಟೆ ಕೋವಿ, ಏಳು ತೋಟೆಗಳು ಹಾಗೂ 40 ಸಾವಿರ ರೂ. ಮೌಲ್ಯದ ಬೈಕ್ ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ


