ಉಡುಪಿ : ಮಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಖಾಸಗಿ ಎಕ್ಸ್ಪ್ರೆಸ್ ಬಸ್ನಲ್ಲಿದ್ದ ಪ್ರಯಾಣಿಕನೊಬ್ಬ ಬಸ್ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ–66 ರ ಉಚ್ಚಿಲದಲ್ಲಿ ನಡೆದಿದೆ. ಸಕೇಂದ್ರ ಪೂಜಾರಿ (52) ಅಪಘಾತದಲ್ಲಿ ಮೃತಪಟ್ಟವರು.

ಕಾಪು ಪಡುಗ್ರಾಮದ ನಿವಾಸಿಯಾದ ಸಕೇಂದ್ರ ಪೂಜಾರಿ ಅವರು ಮಂಗಳೂರಿನ ಹೋಟೆಲೊಂದರಲ್ಲಿ ಉದ್ಯೋಗಿಯಾಗಿದ್ದರು. ಅವರು ಮಂಗಳೂರಿನಿಂದ ಉಡುಪಿಗೆ ತೆರಳುವ ವೇಳೆ ಬಸ್ ಉಚ್ಚಿಲ ತಲುಪಿದಾಗ ಇಳಿಯಲು ಮುಂಭಾಗದ ಬಾಗಿಲಿನ ಬಳಿ ನಿಂತಿದ್ದ ಸಕೇಂದ್ರ, ಎದುರು ಬರುತ್ತಿದ್ದ ವಾಹನವನ್ನು ಹಿಂದಿಕ್ಕಲು ಚಾಲಕ ಮಾಡಿದ ನಿರ್ಲಕ್ಷ್ಯಪೂರ್ಣ ಬಲ ತಿರುಗಾಟದಿಂದ ಬಾಗಿಲಿಂದ ಹೊರಗೆ ಎಸೆಯಲ್ಪಟ್ಟಿದ್ದಾರೆ. ರಸ್ತೆ ವಿಭಜಕಕ್ಕೆ ಹೊಡೆದು ತಲೆಗೆ ತೀವ್ರ ಗಾಯಗೊಂಡ ಹಿನ್ನಲೆಯಲ್ಲಿ ಮೃತಪಟ್ಟಿದ್ದಾರೆ.

ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿ ಪ್ರಥಮ ಚಿಕಿತ್ಸೆ ನೀಡಿ, ಸ್ಥಳೀಯ ಅಂಬ್ಯುಲೆನ್ಸ್ ಮೂಲಕ ಸಕೇಂದ್ರರನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿದರು. ಆದರೆ ಆಗಲೇ ಅವರು ಮೃತಪಟ್ಟಿರುವುದು ವೈದ್ಯರು ದೃಢಪಡಿಸಿದ್ದಾರೆ, ಘಟನೆಯ ಹಿನ್ನೆಲೆಯಲ್ಲಿ ಬಸ್ ಚಾಲಕನ ವಿರುದ್ಧ ನಿರ್ಲಕ್ಷ್ಯ ಚಾಲನೆ ಪ್ರಕರಣವನ್ನು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.



