ಉಡುಪಿ : ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಾಲಿಗ್ರಾಮ ಕಯಾಕಿಂಗ್ ತಂಡ ಸೀತಾ ನದಿಯ ಮಧ್ಯಭಾಗದಲ್ಲಿ ವಿಶಿಷ್ಟವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶಪ್ರೇಮದ ಸಂದೇಶ ಸಾರಿತು.ಪ್ರಕೃತಿ ಹಾಗೂ ದೇಶಪ್ರೇಮವನ್ನು ಬೆಸೆಯುವ ಉದ್ದೇಶದಿಂದ ಪ್ರತಿವರ್ಷ ವಿಭಿನ್ನ ರೀತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ತಂಡ, ಈ ಬಾರಿ ನದಿಯ ಮಧ್ಯದಲ್ಲಿರುವ ಕಾಂಡ್ಲಾ ಮರಗಳ ನಡುವೆ ಮರದ ಸೇತುವೆ ನಿರ್ಮಿಸಿ ಅದರ ಮೇಲೆ ತ್ರಿವರ್ಣ ಧ್ವಜ ಹಾರಿಸಿತು.

ಬದುಕು ಕೊಟ್ಟ ನಾಡ ಮಣ್ಣಲಿ, ಬಂಧಗಳ ಸೇತುವೆ ಕಟ್ಟಿ, ದೇಶಭಕ್ತಿಯ ನೂಲ ಬಿಗಿದು, ನಾಡಿನ ಹೆಮ್ಮೆ ಮೇಲೇಳಲಿ ಎಂಬ ಆಶಯದೊಂದಿಗೆ ನಡೆದ ಈ ಕಾರ್ಯಕ್ರಮ ಗಮನ ಸೆಳೆಯಿತು.ಸೀತಾ ನದಿಯಲ್ಲಿ ಕಯಾಕಿಂಗ್ ಮೂಲಕ ಪ್ರಕೃತಿಯ ಸೌಂದರ್ಯ ಪರಿಚಯಿಸುವ ತಂಡ, ಪರಿಸರ ಪ್ರೇಮದ ಜೊತೆಗೆ ದೇಶಪ್ರೇಮವನ್ನೂ ಬೆಳೆಸುವ ಸಂದೇಶ ನೀಡುತ್ತಿದೆ. ಹರ್ ಘರ್ ತಿರಂಗ ಅಭಿಯಾನದ ಆಶಯಕ್ಕೆ ಪೂರಕವಾಗಿ ನಡೆದ ಈ ವಿಶೇಷ ಧ್ವಜಾರೋಹಣ ಸ್ವಾತಂತ್ರ್ಯೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಿತು.

ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಕಯಾಕಿಂಗ್ನ ಮುಖ್ಯಸ್ಥ ಮಿಥುನ್ ಕುಮಾರ್ ಮೆಂಡನ್, ಲೋಕೇಶ್ ಸೇರಿದಂತೆ ತಂಡದ ಸದಸ್ಯರು ಉಪಸ್ಥಿತರಿದ್ದರು.


