ಉಡುಪಿ: ಯುವಕ ಮಂಡಲ (ರಿ.) ಪೆರಂಪಳ್ಳಿಯ ಸುವರ್ಣ ಮಹೋತ್ಸವ ಸಮಿತಿಯ ಉದ್ಘಾಟನೆ, ಲಾಂಛನ ಬಿಡುಗಡೆ ಹಾಗೂ ಧ್ವಜಾರೋಹಣ ಕಾರ್ಯಕ್ರಮವು ದಿ. ಶ್ರೀ ಮಂಜುನಾಥ ಶಿವತ್ತಾಯ ರಂಗಮಂಟಪದಲ್ಲಿ ಮಂಡಲದ ಅಧ್ಯಕ್ಷ ಶಶಾಂಕ್ ಶಿವತ್ತಾಯ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಬಳಿಕ ಯಕ್ಷಗುರು ಬನ್ನಂಜೆ ಶ್ರೀ ಸಂಜೀವ ಸುವರ್ಣ ಅವರು ಸಮಿತಿಯ ನೂತನ ಧ್ವಜಾರೋಹಣ ನೆರವೇರಿಸಿದರು. ಮಣಿಪಾಲದ ಮುಖ್ಯ ಪಶುವೈದ್ಯಾಧಿಕಾರಿ ಡಾ. ಪ್ರಶಾಂತ್ ಶೆಟ್ಟಿ ಅವರು ಸಮಿತಿಯ ಲಾಂಛನವನ್ನು ಬಿಡುಗಡೆಗೊಳಿಸಿದರು.

ಇದಾದ ನಂತರ ಜಿಲ್ಲಾ ಪಂಚಾಯತ್ ಉಡುಪಿ, ಪಶುಚಿಕಿತ್ಸಾಲಯ ಮಣಿಪಾಲ, ಯುವಕ ಮಂಡಲ (ರಿ.) ಪೆರಂಪಳ್ಳಿ, ಉಡುಪಿ ಜಿಲ್ಲಾ ಕೃಷಿಕ ಸಂಘ ಪೆರಂಪಳ್ಳಿ ವಲಯ, ನವಚೈತನ್ಯ ಯುವಕ ಮಂಡಲ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಇವರ ಜಂಟಿ ಆಶ್ರಯದಲ್ಲಿ ಸಾಕು ನಾಯಿಗಳಿಗೆ ಉಚಿತ ರೇಬಿಸ್ ನಿರೋಧಕ ಲಸಿಕಾ ಶಿಬಿರ ನಡೆಯಿತು. ಪೆರಂಪಳ್ಳಿಯ ಮೂರು ಸ್ಥಳಗಳಲ್ಲಿ ಸುಮಾರು 150ಕ್ಕೂ ಅಧಿಕ ಸಾಕು ನಾಯಿಗಳಿಗೆ ಲಸಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಸೂರ್ಯೋದಯ ಪೆರಂಪಳ್ಳಿ, ಯಕ್ಷಗುರು ಸಂಜೀವ ಸುವರ್ಣ, ಡಾ. ಪ್ರಶಾಂತ್ ಶೆಟ್ಟಿ, ರವೀಂದ್ರ ಪೂಜಾರಿ, ವಿಶಾಲ್, ಗಣೇಶ್ ಪೂಜಾರಿ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಮಂಡಲದ ಗೌರವಾಧ್ಯಕ್ಷರಾದ ಹರಿಕೃಷ್ಣ ಶಿವತ್ತಾಯ, ಗಂಗಾಧರ ಆಚಾರ್ಯ, ಸುಧಾಕರ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ರಕ್ಷಿತ್ ಕೋಟ್ಯಾನ್ ಹಾಗೂ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಘವೇಂದ್ರ ಭಟ್ ನಿರೂಪಿಸಿದರು.



