ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮೀನುಗಾರರು ಶ್ರಮ ಜೀವಿಗಳು. ಸತ್ಯ, ನ್ಯಾಯ, ಧರ್ಮದಲ್ಲಿ, ಸೌಹಾರ್ದತೆಯಲ್ಲಿ ನಂಬಿಕೆವುಳ್ಳವರು. ಅವರ ಒಳ್ಳೆತನವನ್ನು ಸಂಘಟಿತ ಶಕ್ತಿಯನ್ನು ನಮ್ಮ ಸಂವಿಧಾನ ಪ್ರತಿಪಾದಿಸುವ ಮಹತ್ವದ ಜೀವನ ಮೌಲ್ಯಗಳ ಆಧಾರದಲ್ಲಿ, ಇಡೀ ಸಮಾಜವನ್ನು ಪರಿವರ್ತಿಸಲು ಬಳಸಿಕೊಳ್ಳಬೇಕೇ ಹೊರತು, ಕಾನೂನು ಉಲ್ಲಂಘನೆಯನ್ನು ಹೇಯ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಅಲ್ಲ. ಇದನ್ನು ಯಾರೂ ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಬಾರದು ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ ಮನವಿ ಮಾಡಿದೆ.
ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಮಾತನಾಡಿ, ಮಲ್ಪೆ ಬಂದರು ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ತಲೆ ಮೇಲೆ ಮೀನು ಹೊರುವ ಕಾಯಕದಲ್ಲಿ ನಿರತರಾಗಿದ್ದ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರನ್ನು ಮಾ.18ರಂದು ಕೆಲಸದ ವೇಳೆಯಲ್ಲಿ ಸ್ವಲ್ಪ ಮೀನು ಕದ್ದರು ಎಂಬ ಕ್ಷುಲ್ಲಕ ಆರೋಪದಲ್ಲಿ ಅಮಾನವೀಯವಾಗಿ ಮರಕ್ಕೆ ಹಗ್ಗದಿಂದ ಕಟ್ಟಿಹಾಕಿ, ಥಳಿಸಿದ ಪ್ರಕರಣದಲ್ಲಿ ಎಲ್ಲ ತಪ್ಪಿತಸ್ಥರ ವಿರುದ್ಧ ಮತ್ತು ಈ ಹೇಯ ಅಪರಾಧ ಕೃತ್ಯವನ್ನು ಬಹಿರಂಗವಾಗಿ ಬೆಂಬಲಿಸಿದ ಎಲ್ಲರ ವಿರುದ್ಧ ನಿಯಮಾನುಸಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲೇಬೇಕು. ಇದರಲ್ಲಿ ರಾಜಿ ಮಾಡಿಕೊಳ್ಳಲು ನಮ್ಮ ಪ್ರಜ್ಞಾವಂತ ಸಮಾಜ ಅವಕಾಶ ನೀಡಬಾರದು ಎಂದರು.
ಜಾತಿ,ಮತ,ಧರ್ಮ ಬೇಧ ಭಾವ ಇಲ್ಲದೆ ಈ ದಿಕ್ಕಿನಲ್ಲಿ ಎಲ್ಲರೂ ಪೊಲೀಸರನ್ನು ಬೆಂಬಲಿಸಬೇಕು. ಪೊಲೀಸರು ಕರ್ತವ್ಯ ಲೋಪ ಎಸಗಿದ್ದರೆ ಅವರ ವಿರುದ್ಧವೂ ಕ್ರಮಕೈಗೊಳ್ಳಲು ಅವಕಾಶವಿದ್ದೇ ಇದೆ. ಆದ್ದರಿಂದ ಯಾರೂ ಸಂಘಟಿತ ಶ್ರಮಜೀವಿ ಜನವರ್ಗವನ್ನು ಕಾನೂನು ಉಲ್ಲಂಘಿಸಲು ಪ್ರೇರೆಪಿಸಬಾರದು ಎಂದು ವಿನಂತಿಸಿದ್ದಾರೆ. ಈ ದೌರ್ಜನ್ಯ ಸಂತ್ರಸ್ತ ಮತ್ತು ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ಕಲ್ಪಿಸ ಬೇಕು, ಸಂತ್ರಸ್ಥೆಗೆ ತುರ್ತು ಪರಿಹಾರ ಬಿಡುಗಡೆ ಮಾಡಬೇಕು ಮತ್ತು ಅವರ ಕುಟುಂಬಕ್ಕೆ ಸೂಕ್ತ ಪುನರ್ವಸತಿ ಕಲ್ಪಿಸಬೇಕು ಎಂದು ನಾವು ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಎಸ್ಪಿ ಅವರನ್ನು ಆಗ್ರಹಿಸುತ್ತೇವೆ.
ಇದಾದ ಬಳಿಕ ಪೋಲೀಸರ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕೆಲವರು ಬಳಸಿದ ಭಾಷೆಯಿಂದ ಮತ್ತು ಮಾನವತೆವುಳ್ಳ ಪ್ರತಿಯೊಬ್ಬನೂ ತಲೆ ತಗ್ಗಿಸುವಂತೆ ಮಾಡಿದ ಈ ಹೇಯ ಕೃತ್ಯವನ್ನು ಸಮರ್ಥಿಸಿದ ರೀತಿಯಿಂದ, ಪರಿಶಿಷ್ಟರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಹಾಕಿದ ಕೇಸು ವಾಪಸು ಪಡೆಯಬೇಕೆಂದು ನೀಡಿದ ಎಚ್ಚರಿಕೆಯ ಸ್ವರೂಪದಿಂದ ಕೂಡಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯಗಳ ಜನರಲ್ಲಿ ಅವ್ಯಕ್ತ ಆತಂಕವುಂಟಾಗಿದೆ.
ಈ ಹಿನ್ನೆಲೆಯಲ್ಲಿ, ಪರಿಶಿಷ್ಟ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ, ಅವರ ಮೇಲೆ ಸಾರ್ವಜನಿಕವಾಗಿ ಅವಮಾನಮಾಡಿ ದೌರ್ಜನ್ಯ ನಡೆಸಿರುವ ಮತ್ತು ಆ ದೌರ್ಜನ್ಯವನ್ನು ಬೆಂಬಲಿಸಿರುವ ಹಾಗೂ ಸಮರ್ಥಿಸಿರುವ ಎಲ್ಲರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸು ದಾಖಲಿಸಿ, ಕಾನೂನಿನ ಮಾನ ಕಾಪಾಡಲೇಬೇಕು. ಇದು ಎಲ್ಲರೂ ಸಮಾನತೆಯ ಅಧಾರದಲ್ಲಿ, ಸೌಹಾರ್ದತೆಯಿಂದ ಬದುಕಲು ಅತ್ಯಗತ್ಯವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕಾಂತಪ್ಪ, ಸದಾಶಿವ ಸಾಲಿಯಾನ್, ಸರೋಜಿನಿ ಬಂಟ್ವಾಳ, ರಘು ಎಕ್ಕಾರ್, ಕೃಷ್ಣ ಮೂಡುಬೆಳ್ಳೆ, ಮಾಧವ ಕಾವೂರು, ಪದ್ಮನಾಭ ಉಪಸ್ಥಿತರಿದ್ದರು.