ಉಡುಪಿ : ತಿಂಗಳ ಹಿಂದೆ ನಡುರಾತ್ರಿ ಅಂಬಲಪಾಡಿಯಲ್ಲಿ ರಕ್ಷಿಸಲ್ಪಟ್ಟ ಮಹಾರಾಷ್ಟ್ರ ಮೂಲದ ಮನೋರೋಗಿ ಮಹಿಳೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಇದೀಗ ಸಂಬಂಧಿಕರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಕುಟುಂಬದವರ ವಶಕ್ಕೆ ಒಪ್ಪಿಸಲಾಗಿದೆ. ಮಹಾರಾಷ್ಟ್ರದ ಸತಾರ ಮೂಲದ ಕೀರ್ತನಾ (45) (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆ ತಿಂಗಳ ಹಿಂದೆ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡುರಾತ್ರಿ ಮನೋವ್ಯಾಧಿಯಿಂದ ಅಸ್ವಸ್ಥಳಾಗಿ ಅಲೆದಾಡುತ್ತಿದ್ದರು. ವಿಷಯ ತಿಳಿದ ವಿಶು ಶೆಟ್ಟಿ ಅಂಬಲಪಾಡಿ ಅವರು ಮಹಿಳೆಯನ್ನು ರಕ್ಷಿಸಿ ತುರ್ತು ಸಖಿ ಕೇಂದ್ರಕ್ಕೆ ದಾಖಲಿಸಿ ಬಳಿಕ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು.

ಚಿಕಿತ್ಸೆಗೆ ಸ್ಪಂದಿಸಿದ ಮಹಿಳೆ ತನ್ನ ಕುಟುಂಬದ ಬಗ್ಗೆ ಕೆಲವು ಮಾಹಿತಿ ನೀಡಿದ್ದು, ಅದರ ಆಧಾರದಲ್ಲಿ ಸಂಬಂಧಿಕರನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಬಳಿಕ ಮಹಿಳೆಯ ಸಹೋದರ ಹಾಗೂ ಸಂಬಂಧಿಕರು ಉಡುಪಿಗೆ ಬಂದು ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ.

ಮಹಿಳೆಯ ಪತಿ ಮೃತಪಟ್ಟಿದ್ದರಿಂದ ಆ ನೋವಿನಿಂದ ಅವರು ಖಿನ್ನತೆಗೆ ಒಳಗಾಗಿದ್ದರೆಂಬ ಮಾಹಿತಿ ಲಭಿಸಿದೆ. ಇದೀಗ ಸಹಜ ಸ್ಥಿತಿಗೆ ಬಂದಿರುವ ಮಹಿಳೆ ಕುಟುಂಬದವರನ್ನು ಕಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯ ಮನೋರೋಗ ತಜ್ಞ ಡಾ. ವಾಸುದೇವ, ಆಸ್ಪತ್ರೆ ಸಿಬ್ಬಂದಿ ಹಾಗೂ ಸುರೇಶ್ ಮತ್ತು ತಂಡದ ಚಿಕಿತ್ಸೆಯಿಂದ ಮಹಿಳೆ ಶೀಘ್ರ ಚೇತರಿಸಿಕೊಂಡರು. ರಕ್ಷಣಾ ಕಾರ್ಯದಲ್ಲಿ ನಗರ ಪೊಲೀಸ್ ಠಾಣೆಯ ಎಚ್.ಸಿ. ರಮೇಶ್, ಶಶಿಕಾಂತ್ ಉಪಾಧ್ಯ ಅಂಬಲಪಾಡಿ ಹಾಗೂ ಹರೀಶ್ ಉದ್ಯಾವರ ಸಹಕರಿಸಿದರು.



