ಉಡುಪಿ: ದೇವರೇ, ಏನೂ ತಪ್ಪು ಮಾತನಾಡಿಸಬೇಡಪ್ಪಾ ಎಂದು ಉಡುಪಿ ಕೃಷ್ಣ ನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಏನು ಮಾತಾಡಿದರೂ ಅದು ತಪ್ಪಾಗಿ ಬಿಡುತ್ತದೆ. ನಮ್ಮ ಸಂಸ್ಕೃತಿ ಈ ದೇಶದ ಆಸ್ತಿ- ಶಕ್ತಿ, ಪ್ರಯತ್ನ ವಿಫಲ ಆಗಬಹುದು ಪ್ರಾರ್ಥನೆ ವಿಫಲ ಆಗಲ್ಲ. ದೇವರಲ್ಲಿ ಕಷ್ಟ ಸುಖದ ಪ್ರಾರ್ಥನೆ ಮಾಡುತ್ತೇವೆ, ಸೋಲು ಮರೆತು ಗೆಲುವಿಗಾಗಿ ಪ್ರಾರ್ಥನೆ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಅವರು ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠದ ವತಿಯಿಂದ ಪರ್ಯಾಯ ಪುತ್ತಿಗೆ ಮಠಾಧೀಶ ರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ 64ನೇ ಜನ್ಮ ನಕ್ಷತ್ರೋತ್ಸವ ಸಂಭ್ರಮ ನಿಮಿತ್ತ ಶನಿವಾರ ರಾಜಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀಮನ್ಮಧ್ವಾಚಾರ್ಯರ ಅಂಚೆ ಚೀಟಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿ, ಧರ್ಮ, ಪೂಜೆ, ಭಕ್ತಿ ಪ್ರದರ್ಶನದ ವಸ್ತುವಲ್ಲ. ಆಚಾರ, ವಿಚಾರವನ್ನು ಎಲ್ಲರೂ ಒಟ್ಟಾಗಿ ಕೊಂಡೊಯ್ಯಬೇಕು.ಮರಕ್ಕೆ ಬೇರು ಎಷ್ಟು ಮುಖ್ಯವೋ ಹಾಗೆಯೇ ಮನುಷ್ಯನಿಗೆ ನಂಬಿಕೆ ಮುಖ್ಯ. ಹೀಗಾಗಿ ಧರ್ಮವನ್ನು ಉಳಿಸಿಕೊಂಡು ನಾವೆಲ್ಲರೂ ಮುಂದೆ ಸಾಗೋಣ. ಶ್ರೀ ಕೃಷ್ಣನು ಉತ್ತಮ ಶಿಕ್ಷಕ, ಮಾರ್ಗದರ್ಶಕ, ಚಿಂತಕ, ಪ್ರೇಮಿ, ರಾಜಕಾರಣಿಯೂ ಹೌದು. ಧರ್ಮರಾಯನ ಧರ್ಮ, ಕರ್ಣನ ದಾನ, ಅರ್ಜುನನ ಗುರಿ, ಭೀಮನ ಬಲ, ವಿದುರನ ನೀತಿ ಹಾಗೂ ಕೃಷ್ಣನ ತಂತ್ರಗಾರಿಕೆ ನಮ್ಮಲ್ಲಿ ಇರಬೇಕು ಎಂದರು ಡಿ ಕೆ ಶಿವಕುಮಾರ್. ದಾರಿ ಇದ್ದಲ್ಲಿ ನಡೆಯ ಬೇಕು. ದಾರಿ ಇಲ್ಲದಲ್ಲಿ ದಾರಿ ಮಾಡಿಕೊಂಡು ಸಾಗಬೇಕು. ದೇವರು ವರವನ್ನು ನೀಡುವುದಿಲ್ಲ, ಶಾಪವನ್ನು ಕೊಡುವುದಿಲ್ಲ. ಅವಕಾಶವನ್ನು ಮಾತ್ರ ನೀಡುತ್ತಾನೆ ಎಂದರು.

ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿ, ಪ್ರಸ್ತುತ ಜಗತ್ತಿನಲ್ಲಿ ಎಡಬಲ ಚಿಂತನೆ ಅತಿರೇಕಕ್ಕೆ ಏರಿದೆ. ಇಂತಹ ಸಂದರ್ಭದಲ್ಲಿ ಮಧ್ವಾಚಾರ್ಯರು ಸಾರಿದ ನಡುಪಂಥೀಯ ಚಿಂತನೆ ಸಮಾಜವನ್ನು ಅಥವಾ ಜಗತ್ತನ್ನು ಸುಸ್ಥಿತಿಗೆ ತರಬಹುದು ಎಂದರು. ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಇದೇ ಸಂದರ್ಭ ಕರ್ನಾಟಕ ವಲಯದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ. ಪ್ರಕಾಶ್ ಅವರು ಶ್ರೀ ಮನ್ಮಧ್ವಾಚಾರ್ಯರ ಅಂಚೆ ಚೀಟಿ ಬಿಡುಗಡೆ ಮಾಡಿದರು.
ಶಾಸಕರಾದ ಯಶ್ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಮಾಹೆ ವಿ.ವಿ. ಸಹಕುಲಾಧಿ ಪತಿ ಡಾ| ಎಚ್.ಎಸ್. ಬಲ್ಲಾಳ್, ಕೇಂದ್ರೀಯ ಸಂಸ್ಕೃತ ವಿ.ವಿ.ಯ ಡಾ| ಶ್ರೀನಿವಾಸ ವರಖೇಡಿ, ಬೆಂಗಳೂರಿನ ತಥಾಗತ್ ಹೃದಯ ಆಸ್ಪತ್ರೆಯ ಡಾ|ಮಹಂತೇಶ ಆರ್. ಚರಂತಿಮಠ, ಜಿಲ್ಲಾ ಧಿಕಾರಿ ಸ್ವರೂಪಾ ಟಿ.ಕೆ., ಶತಾವಧಾನಿ ಡಾ| ರಮಾನಾಥ ಆಚಾರ್ಯ, ಪೊಲೀಸ್ ಇಲಾಖೆಯ ಹಿರಿಯ ಅಧಿ ಕಾರಿ ಸುಜೇಂದ್ರ ಉಪಸ್ಥಿತರಿದ್ದರು. ಮಾಹೆ ವಿ.ವಿ. ಸಹಕುಲಪತಿ ಡಾ| ಶರತ್ ಕೆ. ರಾವ್ ಸ್ವಾಗತಿಸಿ, ಪೂರ್ಣಿಮಾ ಜನಾರ್ದನ ನಿರೂಪಿಸಿದರು.
