ಉಡುಪಿ : ಮಲ್ಪೆ ಸಮುದ್ರ ತೀರದ ತೊಟ್ಟಂ ಬಳಿ ಮೀನುಗಾರಿಕೆ ನಾಡದೋಣಿಯಲ್ಲಿ ಮೀನುಗಾರರು ತೆರಳಿದ ಸಂದರ್ಭ ದೋಣಿ ಮಗುಚಿ ನಾಲ್ವರು ನೀರಿಗೆ ಬಿದ್ದ ಘಟನೆ ನಡೆದಿದೆ. ಏಡಿಬಲೆಗೆ ಹೋದ ನಾಲ್ವರು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದೆ. ಏಡಿಬಲೆಗೆಂದು ಸಮುದ್ರಕ್ಕೆ ನಾಡದೋಣಿಯೊಂದಿಗೆ ಇಳಿದಾಗ ಭಾರಿ ಅಲೆಯ ಹೊಡೆತಕ್ಕೆ ದೋಣಿ ಮಗುಚಿದೆ. ದೋಣಿಯಲ್ಲಿದ್ದ ಮೀನುಗಾರರು ಈಜಿ ರಕ್ಷಿಸಿಕೊಳ್ಳುವ ಹೋರಾಟದಲ್ಲಿರುವುದನ್ನು ಗಮನಿಸಿದ ತೊಟ್ಟಂ ವಾರ್ಡಿನ ನಗರ ಸಭಾ ಸದಸ್ಯರಾದ ಯೋಗೇಶ್ ರವರು ಈಶ್ವರ್ ಮಲ್ಪೆ ತಂಡಕ್ಕೆ ಮಾಹಿತಿ ನೀಡಿದ್ದಾರೆ.

ಬಳಿಕ ಸ್ಥಳಕ್ಕೆ ಬಂದ ಈಶ್ವರ್ ಮಲ್ಪೆ ತಂಡ ಮತ್ತು ಸ್ಥಳಿಯರಾದ ಪ್ರವೀಣ್, ಉದಯ್ ಯವರ ಜೊತೆ ಸೇರಿ ಸೈಫ್ ಜಾಕೇಟ್ ನೀಡಿ ನಾಲ್ವರು ಮೀನುಗಾರರ ಜೀವ ರಕ್ಷಣೆ ಮಾಡಿದ್ದಾರೆ. ಮಳೆಯ ಹಿನ್ನಲೆಯಲ್ಲಿ ಕ್ಷಣ ಕ್ಷಣಕ್ಕೂ ಮಲ್ಪೆಯ ಕಡಲು ಭಾರಿ ಅಲೆಗಳೊಂದಿಗೆ ಪ್ರಕ್ಷುಬ್ಧವಾಗಿದೆ. ಈ ಹಿನ್ನಲೆಯಲ್ಲಿ ಯಾರು ಕೂಡ ನೀರಿಗೆ ಇಳಿದಂತೆ, ಮೀನುಗಾರರು ಲೈಫ್ ಜಾಕೆಟ್ ಹಾಕಿಕೊಂಡು ಮೀನುಗಾರಿಕೆ ನಡೆಸುವಂತೆ ಮುಳುಗು ತಜ್ಞ ಈಶ್ವರ್ ಮಲ್ಪೆ ಮನವಿ ಮಾಡಿದ್ದಾರೆ.


