ಉಡುಪಿ: ಕೇಂದ್ರ ಸರ್ಕಾರದ ಕಾರ್ಪೋರೇಟ್ ಪರವಾದ ನೀತಿಯಿಂದ ಬೆಲೆ ಏರಿಕೆ, ನಿರುದ್ಯೋಗ, ಕಾರ್ಮಿಕರ ಕಾನೂನುಗಳ ರದ್ಧತಿ, ರೈಲ್ವೆ, ವಿದ್ಯುತ್,ಮೀನುಗಾರಿಕ ಬಂದರುಗಳ ಮಾರಾಟದಂತಹ ಕ್ರಮಗಳನ್ನು ಅನುಸರಿಸುತ್ತಿದೆ ಇಂತಹ ಜನವಿರೋಧಿ ನೀತಿಗಳನ್ನು ಜನರಿಗೆ ತಿಳಿಸುವ ಸಲುವಾಗಿ ಭಾರತ ಕಮ್ಯುನಿಸ್ಟ್ (ಪಕ್ಷ ಮಾರ್ಕ್ಸ್ ವಾದಿ) ದೇಶದಾದ್ಯಂತ ಮನೆ ಮನೆ ಪ್ರಚಾರವನ್ನು ನಡೆಸುತ್ತಿದೆ.

ರಾಜ್ಯ ಸರಕಾರವೂ ಕೂಡ ಕೇಂದ್ರ ಸರ್ಕಾರದ ನೀತಿಗಳನ್ನೇ ಜಾರಿ ಮಾಡುತ್ತಿದೆ 12 ಗಂಟೆಯ ಕೆಲಸದ ಅವಧಿ ಹೆಚ್ಚಳ, ಕಾರ್ಮಿಕರ ನೂತನ ಸಂಹಿತೆ ಜಾರಿ ಮಾಡಲು ಮುಂದಾಗುತ್ತಿದೆ ಇದರಿಂದ ಕಾರ್ಮಿಕ ವರ್ಗ ಮತ್ತು ಜನಸಾಮಾನ್ಯರು ಮತ್ತಷ್ಟು ಸಂಕಷ್ಟ ಅನುಭವಿಸುತ್ತಾರೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಅವರು ಕುಂದಾಪುರ ತಾಲೂಕು ಕಟ್ ಬೇಲ್ತೂರು ನಲ್ಲಿ ನಡೆದ ಮನೆ ಮನೆ ಪ್ರಚಾರ ಸಂದರ್ಭದಲ್ಲಿ ಹೇಳಿದರು. ಜೂನ್ -20 ರಿಂದ 27 ವರೆಗೆ ಜಿಲ್ಲೆಯಾದ್ಯಂತ ಜನರ ಸ್ಥಳೀಯ ಬೇಡಿಕೆಗಳೊಂದಿಗೆ ಪ್ರಚಾರ ನಡೆಸಿ ಅನಂತರ ಗ್ರಾಮ ಪಂಚಾಯತ್ ಗಳ ಮೂಲಕ ಮನವಿ ನೀಡಲಾಗುವುದು. ಹೆಮ್ಮಾಡಿ, ವಡೇರಹೋಬಳಿ, ಉಡುಪಿಯ ದೊಡ್ಡಣ್ಣ ಗುಡ್ಡೆ, ಕುಕ್ಕೆ ಕಟ್ಟೆ,ಇಂದ್ರಾನಗರ,ಕೆಳಾರ್ಕಲ್ ಬೆಟ್ಟು, ತಲ್ಲೂರು,ಬಿ.ಸಿ ರಸ್ತೆ ,ಗಂಗೊಳ್ಳಿ, ಗುಲ್ವಾಡಿ,ನಾಡ ಮೊದಲಾದ ಕಡೆಗಳಲ್ಲಿ ಸೇರಿದಂತೆ ಪ್ರಚಾರಾಂದೋಲನ ಮುಂದುವರಿದಿದೆ.

ಸ್ಥಳೀಯ ಬೇಡಿಕೆಗಳು: ಮುರುಡೇಶ್ವರ -ಬೆಂಗಳೂರು ರೈಲು ರಾತ್ರಿ ಓಡಿಸಬೇಕು, ಸರಕಾರಿ ಬಸ್ಸು ಇಲ್ಲದ ಗ್ರಾಮಗಳ ಮಾರ್ಗಗಳಿಗೆ ಕೆಎಸ್ಸಾರ್ಟಿಸಿ ಬಸ್ ಆರಂಭಿಸಿ ಮಹಿಳೆಯರಿಗೆ ಶಕ್ತಿ ಯೋಜನೆ ದೊರಕುವಂತೆ ಮಾಡಬೇಕು. ಉಡುಪಿ ಜಿಲ್ಲೆಯ ಮಾರ್ಗಗಳನ್ನು ರಾಷ್ಟೀಕರಣ ಮಾಡಬೇಕು, ಬ್ರಹ್ಮಾವರದಲ್ಲಿ ಮಂಜೂರಾದ ಇಎಸ್ಐ ಆಸ್ಪತ್ರೆ ಕಾಮಗಾರಿ ಆರಂಭಿಸಬೇಕು, ಬ್ರಹ್ಮಾವರ ಪ್ಲೇಓವರ್ ಬೇಕು,ಗಣಿಗಾರಿಕೆ ನಿಯಮ ಸಡಿಲಗೊಳಿಸಿ ಆವೆ ಮಣ್ಣು,ಮರಳು, ಕೆಂಪು ಕಲ್ಲು ಸಿಗುವಂತೆ ಮಾಡಬೇಕು,ಜನರಿಗೆ ಶಾಶ್ವತ ಶುದ್ಧ ಕುಡಿಯುವ ನೀರು ಒದಗಿಸಬೇಕು, ಎಲ್ಲಾ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿ ಮಾಡಬೇಕು, 94ಸಿ, 94ಸಿಸಿ ಇತ್ಯರ್ಥ ಪಡಿಸಬೇಕು, ಪೋಡಿ ಸಮಸ್ಯೆಗಳನ್ನು ಬಗೆಹರಿಸಬೇಕು, ಬಹುಮಹಡಿ ಕಟ್ಟಡಗಳ ತ್ಯಾಜ್ಯ ನೀರು ನಿರ್ವಹಣೆಗೆ ಕ್ರಮವಹಿಸಬೇಕು, ನಿವೇಶನ ಇಲ್ಲದ ಜನರಿಗೆ ಸರ್ಕಾರ ನಿವೇಶನ ನೀಡಬೇಕು, ಗಂಗೊಳ್ಳಿ -ಕುಂದಾಪುರ ಸಂಪರ್ಕ ಸೇತುವೆ ನಿರ್ಮಾಣ ಮಾಡಬೇಕು,ಬೈಂದೂರು ಸಮುದಾಯದ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಬೇಕು ಮುಂತಾದ ಬೇಡಿಕೆಳಿಗಾಗಿ ಪ್ರಚಾರಾಂದೋಲನ ನಡೆಯುತ್ತಿದೆ ಎಂದು ತಿಳಿಸಿದೆ.