ಮಂಗಳೂರು : ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಹರಿಪಾದೆ ಧರ್ಮದೈವ ಜಾರಂದಾಯ ನೇಮೋತ್ಸವದಲ್ಲಿ ಭಾಗಿಯಾಗಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಭಕ್ತಿಯಿಂದ ದೈವಕ್ಕೆ ಮಲ್ಲಿಗೆ ಹೂವನ್ನು ಅರ್ಪಿಸಿ ನೇಮ ವೀಕ್ಷಿಸಿದ್ದಾರೆ. ಈ ಹಿಂದೆ ತಮಿಳುನಾಡು ಮಾಧ್ಯಮಗಳಲ್ಲಿ ತಮ್ಮ ಆನಾರೋಗ್ಯದ ಮೂಲಕ ಸುದ್ದಿಯಾಗಿದ್ದ ನಟ ವಿಶಾಲ್, ಅದೇ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ದೈವದ ಮೊರೆ ಹೋಗಿದ್ದಾರೆ. ದೈವದ ಅನುಗ್ರಹ ಅರಸಿ ಬಂದಿರುವ ನಟನಿಗೆ, ದೈವ ಅಭಯ ನೀಡಿದ್ದು, ಕಣ್ಣಿರು ಹಾಕಬೇಡ ನಾನಿದ್ದೇನೆ. ಶೀಘ್ರ ನಿನ್ನ ಸಮಸ್ಯೆಯನ್ನು ನಿವಾರಿಸುತ್ತೇನೆ ಎಂದು ದೈವ ಹೇಳಿದೆ. ಹಾಗೆನೇ ಸಂಪೂರ್ಣ ಗುಣಮುಖರಾಗಿ ಬಂದು ಶ್ರೀಕ್ಷೇತ್ರದಲ್ಲಿ ತುಲಾಭಾರ ಸೇವೆ ಕೊಡಲು ತಂತ್ರಿಗಳು ಸಲಹೆ ನೀಡಿದ್ದಾರೆ. ಇದಕ್ಕೆ ವಿಶಾಲ್ ಒಪ್ಪಿಗೆ ನೀಡಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಟ ವಿಶಾಲ್, ಕಾಂತಾರ ಸಿನಿಮಾದಲ್ಲಿ ದೈವ ಮತ್ತು ಇಲ್ಲಿನ ನೇಮೋತ್ಸವ ತಿಳಿದು ಬಂದಿದ್ದೇನೆ. ಮೊದಲ ಬಾರಿಗೆ ನೇಮೋತ್ಸವ ನೋಡುತ್ತಿದ್ದೇನೆ. ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದು ಇಲ್ಲಿಗೆ ಬಂದಿದ್ದೇನೆ. ತುಳು ಚಿತ್ರರಂಗದ ಕುರಿತು ಮೆಚ್ಚುಗೆಯ ಮಾತನ್ನು ಆಡಿದ್ದಾರೆ.

ಹರಿಪಾದೆ ಜಾರಂದಾಯ ಅತ್ಯಂತ ಕಾರಣಿಕದ ದೈವ. ಇಲ್ಲಿ ನಂಬಿ ಬಂದವರಿಗೆ ದೈವ ಇಂಬು ನೀಡುತ್ತಾರೆ. ನೇಮೋತ್ಸವ ಸಂದರ್ಭ ಜಾರಂದಾಯನ ಪಲ್ಲಕ್ಕಿಗೆ ಆವೇಶ ಬರುತ್ತದೆ. ಇದನ್ನು 15 ಜನ ಸೇವಕರು ನಿಯಂತ್ರಣಕ್ಕೆ ಪ್ರಯತ್ನ ಪಟ್ಟರೂ ನಿಯಂತ್ರಣಕ್ಕೆ ದೊರಕುವುದಿಲ್ಲ. ಅಲ್ಲದೆ ಈ ದೈವಸ್ಥಾನದಲ್ಲಿ ತುಲಾಭಾರ ಸೇವೆ ಪ್ರಾಮುಖ್ಯತೆ ಹೊಂದಿದೆ. ಭಕ್ತರು ತಮ್ಮ ಸಮಸ್ಯೆ ನಿವಾರಣೆಗೆ ತುಲಾಭಾರ ಸೇವೆ ನೀಡುತ್ತಿರುವ ಪರಿಪಾಠವಿದೆ. ನಟ ವಿಶಾಲ್ ಕೂಡಾ ತಮ್ಮ ಆರೋಗ್ಯ ಸುಧಾರಿಸಿದ ಕೂಡಲೇ ತುಲಾಭಾರ ಸೇವೆ ನೀಡುವುದಾಗಿ ಮನದಾಳದಿಂದ ದೈವದ ಮುಂದೆ ಹರಕೆ ಹೊತ್ತಿದ್ದಾರೆ.