ಉಡುಪಿ :ಕುಂದಾಪುರ ವಿಧಾನಸಭಾ ಕ್ಷೇತ್ರದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಮ್ತಾಡಿ-ಅಚ್ಲಾಡಿಯನ್ನು ಸಂಪರ್ಕಿಸುವ ಹಿರೇಹೊಳೆಗೆ ನೂತನ ಕಿರುಸೇತುವೆ ನಿರ್ಮಾಣಕ್ಕೆ ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ರೂ 45 ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ.

ಹಿರೇಹೊಳೆಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕಾಲುಸಂಕ ಶಿಥಿಲಗೊಂಡು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿತ್ತು. ಕುಸಿದು ಬೀಳುವ ಭೀತಿ ಹಿನ್ನೆಲೆಯಲ್ಲಿ ಬೇಳೂರು ಗ್ರಾಮ ಪಂಚಾಯಿತಿ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಿ ಎಚ್ಚರಿಕೆ ಫಲಕ ಅಳವಡಿಸಿತ್ತು. ಇದರಿಂದ ನದಿಯ ಆಚೆ ಭಾಗದಲ್ಲಿರುವ ಕೃಷಿ ಗದ್ದೆ ಹಾಗೂ ತೋಟಗಳಿಗೆ ತೆರಳಲು ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿತ್ತು. ಈ ಭಾಗದ ಸುಮಾರು 18 ಕುಟುಂಬಗಳಿಗೆ ಇದು ಪ್ರಮುಖ ಸಂಪರ್ಕ ಮಾರ್ಗವಾಗಿದ್ದು, ಕಾಲುಸಂಕದ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಿತ್ಯ ಸಂಕಷ್ಟ ಅನುಭವಿಸುವಂತಾಗಿತ್ತು.

ಸ್ಥಳೀಯರ ಸಮಸ್ಯೆಯನ್ನು ಮನಗಂಡ ಕ್ಷೇತ್ರದ ಮುಖಂಡ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು ನೂತನ ಸೇತುವೆ ನಿರ್ಮಾಣಕ್ಕೆ ಅನುದಾನ ಕೋರಿ ಹಲವು ಬಾರಿ ಮನವಿ ಸಲ್ಲಿಸಿದ್ದರು. ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಸ್ಥಳೀಯರ ಸಮಸ್ಯೆಯನ್ನು ವಿವರಿಸಿ ಕಾಮಗಾರಿಗೆ ಅನುದಾನ ನೀಡುವಂತೆ ಮನವಿ ಮಾಡಿದ್ದರು. ಇದೀಗ 45 ಲಕ್ಷ ಅನುದಾನ ಕೋರಿ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ನೂತನ ಕಿರುಸೇತುವೆ ನಿರ್ಮಾಣಕ್ಕೆ ದಾರಿ ಸುಗಮವಾಗಿದೆ.

ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಅನುದಾನ ಒದಗಿಸಿದ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸೇತುವೆ ನಿರ್ಮಾಣಕ್ಕಾಗಿ ನಿರಂತರವಾಗಿ ಪ್ರಯತ್ನಿಸಿದ ದಿನೇಶ್ ಹೆಗ್ಡೆ ಅವರಿಗೆ ಚಮ್ತಾಡಿ-ಅಚ್ಲಾಡಿ ಹಾಗೂ ಬೇಳೂರು ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.


