ಉಡುಪಿ: ಗ್ಯಾಸ್ ಬಿಲ್ ಬಾಕಿ ಇದೆ ಎಂದು ಹೇಳಿ ಸಂದೇಶ ಕಳುಹಿಸಿ ಲಕ್ಷಾಂತರ ರೂಪಾಯಿ ಆನ್ಲೈನ್ ವಂಚನೆ ಎಸಗಿರುವ ಪ್ರಕರಣ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕಡಿಯಾಳಿಯ ರವಿದಾಸ್ ರಾಘವೇಂದ್ರ ನಾಯಕ್ ಅವರಿಗೆ ಮಾ.17ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ನಿಮ್ಮ ಗ್ಯಾಸ್ ಬಿಲ್ 20 ರೂಪಾಯಿ ಬಾಕಿಯಾಗಿದೆ ಎಂದು ಹೇಳಿ ತಕ್ಷಣ ಪಾವತಿಸುವಂತೆ ಸೂಚಿಸಿದ್ದಾನೆ. ಬಳಿಕ ವಾಟ್ಸಾಪ್ ಮೂಲಕ ಬಿಲ್ ಬಾಕಿ ಕುರಿತು ಸಂದೇಶ ಕಳುಹಿಸಿ ಎಪಿಕೆ ಫೈಲ್ ಅನ್ನು ಕಳುಹಿಸಿದ್ದಾನೆ.

ಅದನ್ನು ಕ್ಲಿಕ್ ಮಾಡಿದ ನಂತರ, ಅವರ ವಿವಿಧ ಬ್ಯಾಂಕ್ ಖಾತೆಗಳಿಂದ ಒಟ್ಟು 9,78,036 ರೂಪಾಯಿ ಹಣವನ್ನು ಅನಧಿಕೃತವಾಗಿ ಬೇರೆ ಖಾತೆಗಳಿಗೆ ವರ್ಗಾಯಿಸಿ ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಸಾರ್ವಜನಿಕರು ಅಪರಿಚಿತರಿಂದ ಬರುವ ಲಿಂಕ್ಗಳು ಅಥವಾ ಎಪಿಕೆ ಫೈಲ್ಗಳನ್ನು ತೆರೆಯದೇ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.



