ಉಡುಪಿ : ಅಕ್ರಮ ಜಾನುವಾರ ಕಳ್ಳತನ ನಡೆಸಿ ಮಾಂಸ ಮಾಡಿ ಮಾರಾಟ ಮಾಡುವ ಕೃತ್ಯದಲ್ಲಿ ಭಾಗಿಯಾಗಿದ್ದ ಒಟ್ಟು ೧೩ ಪ್ರಕರಣಗಳಲ್ಲಿ ಬೇಕಾದ ಆರೋಪಿಯನ್ನು ಗಂಗೊಳ್ಳಿ ಪೊಲೀಸ್ ರು ಬಂಧಿಸಿದ್ದಾರೆ. ಮೂಡಬಿದಿರೆ ತಾಲೂಕಿನ ತೋಡಾರು ಗ್ರಾಮದ ನಿವಾಸಿ ಮೊಹಮ್ಮದ್ ಅನ್ಸಾರ್ (32) ಬಂಧಿತ ಆರೋಪಿ.

ಜುಲೈ ೩೧ರಂದು ಮುಂಜಾನೆ ೧.೫೦ರ ಸುಮಾರಿಗೆ ಮೇಲ್ ಗಂಗೊಳ್ಳಿ ಸಮೀಪ ಬಿಳಿ ಬಣ್ಣದ ಕಾರನ್ನು ತ್ರಾಸಿ ಕಡೆಗೆ ಮುಖಮಾಡಿ ನಿಲ್ಲಿಸಿದ್ದು, ಇಬ್ಬರು ದನಗಳ್ಳರು ಮೇಲ್ ಗಂಗೊಳ್ಳಿಯ ಬಾಂಬೆ ಬಜಾರ್ ಎದುರು ರಸ್ತೆಯ ಬದಿಯಲ್ಲಿ ಮಲಗಿರುವ ದನವನ್ನು ಹಿಡಿದು ಕಾರಿನ ಹಿಂಬದಿ ಢಿಕ್ಕಿಗೆ ತುಂಬಿಸಿಕೊಂಡು ತ್ರಾಸಿ ಕಡೆಗೆ ಹೋಗುವದನ್ನು ಚಂದ್ರ ಎನ್ನುವವರು ಗಮನಿಸಿ ಹಿಂಬಾಲಿಸಿದ್ದಾರೆ. ಆಗ ಕಾರು ಮುಳ್ಳುಕಟ್ಟೆಯ ಕಡೆಗೆ ಪರಾರಿಯಾದ ಹಿನ್ನಲೆಯಲ್ಲಿ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣ ಗಂಗೊಳ್ಳಿ ಪೊಲೀಸ್ ಎಸೈ ಪವನ್ ನಾಯಕ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಇಂದು ಮುಂಜಾನೆ ಮಂಗಳೂರಿನ ಕೂಳೂರಿನಲ್ಲಿ ಕೃತ್ಯಕ್ಕೆ ಬಳಸಿದ ಕಾರು ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿತನ ಮೇಲೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಒಟ್ಟೂ 13 ಪ್ರಕರಣಗಳು ದಾಖಲಾಗಿರುತ್ತದೆ.


