ಉಡುಪಿ : ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಡಿತಲೆ ಬೆಂಗ್ರೆಯಲ್ಲಿ ಶಾಸಕರ ಅನುದಾನ ನಿಧಿಯಡಿ ನಿರ್ಮಿಸಲಾದ ನೂತನ ಹಿಂದೂ ರುದ್ರಭೂಮಿಯನ್ನು ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಶನಿವಾರ ಉದ್ಘಾಟಿಸಿ ಸಾರ್ವಜನಿಕರ ಬಳಕೆಗೆ ಸಮರ್ಪಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸ್ಥಳೀಯ ಹಿಂದೂ ಸಮಾಜದ ಅಂತ್ಯಸಂಸ್ಕಾರ ಕಾರ್ಯಗಳಿಗೆ ಸೂಕ್ತ ಮೂಲಸೌಕರ್ಯದ ಅಗತ್ಯ ಬಹುಕಾಲದಿಂದ ಇತ್ತು. ಈ ಕೊರತೆಯನ್ನು ನೀಗಿಸುವ ಉದ್ದೇಶದಿಂದ ರುದ್ರಭೂಮಿಯನ್ನು ನಿರ್ಮಿಸಲಾಗಿದ್ದು, ಗ್ರಾಮಸ್ಥರಿಗೆ ಇದು ಅನುಕೂಲವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೋಡಿ ಗ್ರಾಮ ಪಂಚಾಯತ್ನ ನಿಕಟಪೂರ್ವ ಅಧ್ಯಕ್ಷೆ ಗೀತಾ ಖಾರ್ವಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ರವೀಂದ್ರ ರಾವ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯ ರಮೇಶ್ ಕುಮಾರ್, ಸ್ಥಳದಾನಿ ಮಂಜುನಾಥ್ ಖಾರ್ವಿ, ಸ್ಥಳೀಯ ಮುಖಂಡ ದಾಸ ಖಾರ್ವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರ್ವಹಣೆಯನ್ನು ಸುಧೀರ್ ಕುಂದರ್ ವಹಿಸಿಕೊಂಡು ಸ್ವಾಗತ, ನಿರೂಪಣೆ ಹಾಗೂ ವಂದನಾರ್ಪಣೆ ನೆರವೇರಿಸಿದರು.



