ಕುಂದಾಪುರ: ಯಾವುದೇ ಮಾಹಿತಿಯನ್ನು ನೀಡದೇ ಕೊಲ್ಲೂರು ಸಮೀಪದ ಹಳ್ಳಿಯಲ್ಲಿ ವಾಸವಿದ್ದ ಕೊರಗ ಕುಟುಂಬದ ಮನೆಯನ್ನು ಧ್ವಂಸ ಮಾಡಿದ ಪ್ರಕರಣದಲ್ಲಿ ಸಂತ್ರಸ್ತ ಕುಟಂಬಕ್ಕೆ ಕೊನೆಗೂ ಜಿಲ್ಲಾಡಳಿತ ನ್ಯಾಯ ಒದಗಿಸಿದೆ. ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆ ಎಂಬಲ್ಲಿ ಎ.17ರಂದು ನಡೆದ ಮನೆ ಧ್ವಂಸ ಪ್ರಕರಣದ ಸಂತ್ರಸ್ತ ಕೊರಗ ಕುಟುಂಬಕ್ಕೆ ಪುನರ್ವಸತಿಗಾಗಿ 10 ಸೆಂಟ್ಸ್ ಜಾಗವನ್ನು ಮಂಜೂರು ಮಾಡಲು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಆದೇಶಿಸಿದ್ದಾರೆ. ಕಳೆದ 40 ವರ್ಷಗಳಿಂದ ಕಲ್ಯಾಣಿಗುಡೆಯಲ್ಲಿ ವಾಸವಾಗಿದ್ದ ಗಂಗೆ ಕೊರಗ ಅವರ ಮನೆಯನ್ನು ಕೊಲ್ಲೂರು ಶ್ರೀಜಗದಂಭಾ ಸೇವಾ ಟ್ರಸ್ಟ್ನವರು ಏಕಾಏಕಿ ನ್ಯಾಯಾಲಯದ ಆದೇಶ ಇದೆ ಎಂದು ಹೇಳಿ ಧ್ವಂಸಗೊಳಿಸಿದ್ದರು. ಇದರ ವಿರುದ್ಧ ಹಾಗೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ದಲಿತ ಸಂಘಟನೆಗಳು ಹಾಗೂ ಕೊರಗಾಭಿವೃದ್ಧಿ ಸಂಘಟನೆಗಳು ತೀವ್ರ ಹೋರಾಟ ನಡೆಸಿದ್ದವು. ಈ ಸಂಬಂಧ ಟ್ರಸ್ಟ್ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗಂಗೆ ಕೊರಗ ಹಲವು ವರ್ಷಗಳಿಂದ ಮನೆ ಕಟ್ಟಿಕೊಂಡು ಮಕ್ಕಳೊಂದಿಗೆ ವಾಸ ಮಾಡಿಕೊಂಡಿದ್ದು ಅವರ ವಾಸ್ತವ್ಯದ ಮನೆಯನ್ನು ಧ್ವಂಸ ಮಾಡಿರುವುದರಿಂದ ಭೂ ರಹಿತರಾಗಿದ್ದು, ಅವರಿಗೆ ಪುನರ್ ವಸತಿ ಸೌಕರ್ಯ ಕಲ್ಪಿಸಿಕೊಡಲು 10 ಎಕ್ರೆ ಸೆಂಟ್ಸ್ ದರ್ಖಾಸ್ತು ಮಂಜೂರು ಮಾಡುವ ಬಗ್ಗೆ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರು ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಅದರಂತೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969 ರ ನಿಯಮ 5(ಎ)ರಡಿ ತಾಲ್ಲೂಕಿನಲ್ಲಿ ಶೇ.50ಕ್ಕಿಂತ ಕಡಿಮೆಯಾಗದ ರೀತಿಯಲ್ಲಿ ಅನುಸೂಚಿತ ಜಾತಿಯ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಭೂಮಿಗಳನ್ನು ಮಂಜೂರಾತಿಗೆ ಮೀಸಲಿಡಲು ಅವಕಾಶ ಕಲ್ಪಿಸಿರುವಂತೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಕರ್ನಾಟಕ ಭೂ ಕಂದಾಯ ಮಂಜೂರಾತಿ ನಿಯಮಗಳು, 1969 ರ ನಿಯಮ 12(4) ರಂತೆ ಭೂ ಮೌಲ್ಯವನ್ನು ವಿನಾಯಿತಿಗೊಳಿಸಿ ಷರತ್ತುಗಳಿಗೆ ಒಳಪಟ್ಟು ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ 10 ಸೆಂಟ್ಸ್ ಜಮೀನನ್ನು ಪರಿಶಿಷ್ಟ ಪಂಗಡದ ಗಂಗೆ ಅವರಿಗೆ ಪುನರ್ ವಸತಿ ಸೌಕರ್ಯ ಕಲ್ಪಿಸಲು ಮಂಜೂರು ಮಾಡಿ ಆದೇಶಿಸಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಮಂಜೂರಾದ ಸ್ಥಳವು ಗ್ರಾಮ ಪಂಚಾಯತ್ ರಸ್ತೆಗೆ ಹೊಂದಿಕೊಂಡಿದೆ. ಅರ್ಜಿದಾರರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು, ಅವರ ವಾರ್ಷಿಕ ಆದಾಯ ₹ 11 ಸಾವಿರ ಇದೆ. ಇವರು ಕೊಲ್ಲೂರು ಗ್ರಾಮದಲ್ಲಿ ಬೇರೆ ಯಾವುದೇ ರೀತಿಯ ಜಮೀನನ್ನು ಹೊಂದಿಲ್ಲ. ಆದ್ದರಿಂದ ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ ಸ.ನಂ. 121/* ರಲ್ಲಿ 0.10 ಎಕರೆ ಜಮೀನನ್ನು ಪ.ಪಂಗಡದ ಗಂಗೆ ಕೊರಗ ಇವರಿಗೆ ಪುನರ್ ವಸತಿ ಸೌಕರ್ಯ ಕಲ್ಪಿಸಿಕೊಡುವ ಉದ್ದೇಶದಿಂದ ವಿಶೇಷ ಪ್ರಕರಣ ಎಂದು ಪರಿಗಣಿಸಿ ದರ್ಖಾಸ್ತು ಮಂಜೂರು ಮಾಡಲು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತು ಶಿಫಾರಸ್ಸು ಮಾಡಿ ಪ್ರಸ್ತಾವನೆಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದರು.