ಉಡುಪಿ : ಅಂತರಾಷ್ಟ್ರೀಯ ವಿಶೇಷ ಚೇತನ ದಿನಾಚರಣೆ ಅಂಗವಾಗಿ ಕುಂದಾಪುರ ತಾಲ್ಲೂಕಿನ ವಿಶೇಷ ಚೇತನ ಮಕ್ಕಳಿಗಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಕುಂದಾಪುರ ರೋಟರಿ ಭವನದಲ್ಲಿ ಹಮ್ಮಿಕೊಳ್ಳಲಾಯಿತು. ಶಿಬಿರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ (ಕುಂದಾಪುರ), ಒನ್ ಗುಡ್ ಸ್ಟೆಪ್–ಬೆಂಗಳೂರು, ರೋಟರಿ ಕ್ಲಬ್ ಕುಂದಾಪುರ, ಎಮ್.ಪಿ. & ಐ.ಎಸ್. ಲಿ. (CSR), ಟಿ.ಎಮ್.ಜಿ ಸುನಿಧಿ ಫೌಂಡೇಶನ್ ಟ್ರಸ್ಟ್, ಸಮುದಾಯ ವೈದ್ಯಕೀಯ ವಿಭಾಗ ಮತ್ತು ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನಲ್ಸ್ (ಮಾಹೆ) ಇವರ ಸಹಯೋಗದಲ್ಲಿ ಆಯೋಜಿಸಲಾಯಿತು.

ಶಿಬಿರವನ್ನು ಒನ್ ಗುಡ್ ಸ್ಟೆಪ್ ಫೌಂಡರ್ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಅಮಿತಾ ಪೈ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿ, ವಿಶೇಷ ಚೇತನ ಮಕ್ಕಳ ಸಮಗ್ರ ಅಭಿವೃದ್ಧಿಗೆ ನಮ್ಮ ಟ್ರಸ್ಟ್ ಸದಾ ಕಟಿಬದ್ಧ. ಅವರ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ಒದಗಿಸಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಶೋಭಾ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ರೋಟರಿ ಕ್ಲಬ್ ನ ಅಧ್ಯಕ್ಷರಾದ ರೋ. ನಾಗರಾಜ ಶೆಟ್ಟಿ, ಸಮುದಾಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಯಶ್ ಅಲೋಕ್, ಸ್ಪೀಚ್ & ಹಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅರ್ಚನಾ ಜಿ., ಕುಂದಾಪುರ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿ ಅಶೋಕ ನಾಯ್ಕ ಉಪಸ್ಥಿತರಿದ್ದರು.

ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸುಮಾರು 120 ವಿಶೇಷ ಚೇತನ ಮಕ್ಕಳಿಗೆ ಸಾಮಾನ್ಯ ಆರೋಗ್ಯ ತಪಾಸಣೆ ಹಾಗೂ ಕಣ್ಣು, ಕಿವಿ ತಪಾಸಣೆ, ಮಕ್ಕಳಿಗೆ ಮಾತನಾಡಲು ಹಾಗೂ ದೈಹಿಕ ವ್ಯಾಯಾಮವನ್ನು ತಿಳಿಸಿಕೊಡಲಾಯಿತು.

ತೆಕ್ಕಟ್ಟೆ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸಹಕರಿಸಿದರು. ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಶಂಕರ ಕುಲಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಮನ ಪ್ರಾರ್ಥಿಸಿ, ಸುಕನ್ಯ ವಂದಿಸಿ, ಸಂತೋಷ ಶೆಟ್ಟಿ ನಿರೂಪಿಸಿದರು. ಸಮುದಾಯ ವೈದ್ಯಕೀಯ ವಿಭಾಗದ ಸಾಮಾಜಿಕ ಕಾರ್ಯಕರ್ತ ಮಹೇಶ್ ಆಚಾರ್ಯ, ಕೊಕ್ಕರ್ಣೆ, ರೋಟರಿ ಕ್ಲಬ್ ನ ಕಾರ್ಯದರ್ಶಿ ಸರ್ವೋದಯ ಪೂಜಾರಿ ಹಾಗೂ ಸದಸ್ಯರಾದ ಪಾರ್ವತಿ ಮುದ್ದೋಡಿ ಸಹಕರಿಸಿದರು.



