ಉಡುಪಿ: ಇತ್ತೀಚೆಗೆ ನಿಧನರಾದ ಕಾಮ್ರೇಡ್ ನಿತ್ಯಾನಂದ ಸ್ವಾಮಿ ಅವರಿಗೆ ಉಡುಪಿ ಜಿಲ್ಲಾ ಸಿಪಿಎಂ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕ್ರಿಶ್ಚಿಯನ್ ಧರ್ಮದಲ್ಲಿ ಹುಟ್ಟಿ ಪಾದ್ರಿಯಾಗಲು ತರಬೇತಿ ಪಡೆದಿದ್ದ ನಿತ್ಯಾನಂದ ಸ್ವಾಮಿ ಬಳಿಕ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಕೃಷಿಕೂಲಿಕಾರರನ್ನು ಸಂಘಟಿಸಿ ಅವರ ಮನೆ ನಿವೇಶನ ಹಾಗೂ ಕೂಲಿ ಪ್ರಶ್ನೆಗಳಿಗಾಗಿ ನಿರಂತರ ಹೋರಾಟ ನಡೆಸಿದ ಕ್ರಾಂತಿಕಾರಿ ವ್ಯಕ್ತಿತ್ವ ಎಂದು ಸ್ಮರಿಸಿದರು. ಪಕ್ಷದ ಸದಸ್ಯ ಹಾಗೂ ಮುಖಂಡರಾಗಿ ಶೋಷಿತರ ಪರ ಹಲವಾರು ಹೋರಾಟಗಳನ್ನು ಅವರು ಮುನ್ನಡೆಸಿದವರು ಎಂದರು.

ಮೂಲತಃ ಉಡುಪಿ ಜಿಲ್ಲೆಯ ಸಂತೆಕಟ್ಟೆ ನಿವಾಸಿಯಾಗಿದ್ದ ನಿತ್ಯಾನಂದ ಸ್ವಾಮಿ ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿಕೂಲಿಕಾರರನ್ನು ಸಂಘಟಿಸಿದ್ದರು. ಹೊತನಹಳ್ಳಿಯಲ್ಲಿ ಭೂಹೀನ 40ಕ್ಕೂ ಹೆಚ್ಚು ಕೃಷಿಕೂಲಿಕಾರರಿಗಾಗಿ ಅರಣ್ಯ ಭೂಮಿ ಆಕ್ರಮಣ ಹೋರಾಟದಲ್ಲಿ ಭಾಗವಹಿಸಿ ಕೂಲಿಕಾರರೊಂದಿಗೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಒಂದು ತಿಂಗಳು ಬಂಧನಕ್ಕೊಳಗಾಗಿದ್ದರು ಎಂದು ಹೇಳಿದರು.


ನಿತ್ಯಾನಂದ ಸ್ವಾಮಿ ಬಿಟ್ಟುಹೋದ ಭೂಹೀನರು ಮತ್ತು ಕೃಷಿಕೂಲಿಕಾರರ ಚಳುವಳಿಯನ್ನು ಮುಂದುವರಿಸಿ ಸಂಘಟಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಅವರು ಅಭಿಪ್ರಾಯಪಟ್ಟರು. ಶ್ರದ್ಧಾಂಜಲಿ ಸಭೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಚ್. ನರಸಿಂಹ, ಚಂದ್ರಶೇಖರ ವಿ., ಶಶಿಧರ ಗೊಲ್ಲ ಅವರು ಮಾತನಾಡಿದರು. ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಕವಿರಾಜ್ ಎಸ್. ಕಾಂಚನ್ ವಂದಿಸಿದರು. ಉಮೇಶ್ ಕುಂದರ್, ಶೀಲಾವತಿ, ಸರೋಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.



