ಮಂದಾರ್ತಿ : ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಡೂರಿನ ಪರಿಸರದಲ್ಲಿರುವ ಇತಿಹಾಸ ಪ್ರಸಿದ್ಧ ದೇವತೆ ಕಾಡೂರು ಶ್ರೀ ಅಮ್ಮನವರ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಧಾರ್ಮಿಕ ಅನುಸಂಧಾನದ ಕಾರ್ಯಕ್ರಮ ಫೆಬ್ರವರಿ 28ರಂದು ಮೊದಲ್ಗೊಂಡು ಮಾರ್ಚ್ 12 ಪರ್ಯಂತ ನೆರವೇರಲಿದ್ದು ಇಂದು ಶ್ರೀ ಕ್ಷೇತ್ರಕ್ಕೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಮತ್ತು ಆ ಭಾಗದ ಪ್ರಮುಖರು ಶಾಸಕರನ್ನು ಬರಮಾಡಿಕೊಂಡು ಫಲಪುಷ್ಪ ನೀಡಿ ಶಲ್ಯವನ್ನು ಹಾಕಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಕುಂದಾಪುರ ಮಂಡಲದ ಕಾರ್ಯದರ್ಶಿ ರಾಜೇಶ್ ಶೆಟ್ಟಿ, ಕಾಡೂರು ಗ್ರಾಮ ಪಂಚಾಯಿತಿನ ಅಧ್ಯಕ್ಷ ಜಲಂಧರ ಶೆಟ್ಟಿ, ಪ್ರಮುಖರಾದ ಪ್ರಕಾಶ್ ಶೆಟ್ಟಿ, ಹಾಗೂ ದೇವಸ್ಥಾನದ ಆಡಳಿತ ವರ್ಗದವರು, ಗ್ರಾಮಸ್ಥರು ಭಕ್ತಾದಿಗಳು ಉಪಸ್ಥಿತರಿದ್ದರು.