ಉಡುಪಿ : ಕರ್ತವ್ಯ ಲೋಪದ ಆರೋಪದಡಿ ಜಿಲ್ಲಾ ಪೋಕ್ಸೊ ನ್ಯಾಯಾಲಯದಲ್ಲಿ ಗುತ್ತಿಗೆ ಆಧಾರ ದಲ್ಲಿ ಕರ್ತವ್ಯದಲ್ಲಿದ್ದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ಅವರನ್ನು ವಿಶೇಷ ಸರಕಾರಿ ಅಭಿಯೋಜಕ ಹುದ್ದೆಯ ನೇಮಕಾತಿಯನ್ನು ರದ್ದುಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ನ್ಯಾಯಾಲಯಕ್ಕೆ ಮಾಹಿತಿ ನೀಡದೇ ಮತ್ತು ಪರ್ಯಾಯ ವ್ಯವಸ್ಥೆ ಮಾಡದೆ ನ್ಯಾಯಾಲಯದ ಕಲಾಪದಂದು ಕರ್ತವ್ಯಕ್ಕೆ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ಅನಧಿಕೃತ ಗೈರು ಹಾಜರಾಗಿದ್ದರು. ಇದಲ್ಲದೇ ವೈ.ಟಿ.ರಾಘವೇಂದ್ರ ಅವರ ಮೇಲೆ ಉಡುಪಿಯ ಮಹಿಳಾ ಠಾಣೆಯಲ್ಲಿ ಇವರ ವಿರುದ್ದ ಜಾತಿ ನಿಂದನೆ ಪ್ರಕರಣವು ದಾಖಲಾಗಿತ್ತು.

ವಿಶೇಷ ಸರಕಾರಿ ಅಭಿಯೋಜಕರಾಗಿದ್ದ ವೈ.ಟಿ.ರಾಘವೇಂದ್ರ ಅವರು ಇತರ ನ್ಯಾಯಾಲಯ ಅಥವಾ ಬೇರೆ ಯಾವುದೇ ಪ್ರಕರಣಗಳಲ್ಲಿ ಕಕ್ಷಿಗಾರರ ಪರವಾಗಿ ಪ್ರತಿನಿಧಿಸುವಂತಿಲ್ಲ ಎಂದು ನಿರ್ಬಂಧ ಇದ್ದರೂ ಅವರು ಇತರ ನ್ಯಾಯಾಲಯಗಳಲ್ಲಿ ಹಾಗೂ ಇತರ ಪ್ರಕರಣಗಳಲ್ಲಿ ಕಕ್ಷಿಗಾರರನ್ನು ಪ್ರತಿನಿಧಿಸುತ್ತಿದ್ದಾರೆಂದು ಮಧು ಎಂಬವರು ದಾಖಲೆ ಸಹಿತ ಸರಕಾರಕ್ಕೆ ದೂರು ಸಲ್ಲಿಸಿದ್ದರು. ತಮ್ಮ ಮೇಲೆ ನೀಡಿರುವ ದೂರಿಗೆ ವೈ.ಟಿ.ರಾಘವೇಂದ್ರ ಅವರು ಸರಿಯಾಗಿ ಉತ್ತರಿಸಿಲ್ಲ ಎಂದು ತೀರ್ಮಾನಿಸಿ, ಕರ್ತವ್ಯ ಲೋಪದಡಿ ಅವರ ಉಡುಪಿಯ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಹುದ್ದೆಯ ನೇಮಕಾತಿ ಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಗೃಹ ಇಲಾಖೆಯ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.