ಉಡುಪಿ : ಉಡುಪಿಯ ಹಳೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿಯ ರಾಜರಾಮ್ ಮೋಹನ್ ರಾಯ್ ರಸ್ತೆಯ ಮಹಾಮಾಯ ಕಾಂಪ್ಲೆಕ್ಸ್ನ ಎರಡನೇ ಮಹಡಿಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಸಿಪಿಎಂ ಜಿಲ್ಲಾ ಸಮಿತಿಯ ನೂತನವಾಗಿ ಕಚೇರಿ ಉದ್ಘಾಟಿಸಲಾಯಿತು. ಕಚೇರಿಯನ್ನು ಪಕ್ಷದ ಹಿರಿಯ ಸದಸ್ಯ ಅದಮಾರು ಶ್ರೀಪತಿ ಆಚಾರ್ಯ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಸಿಪಿಎಂ ಚುನಾವಣೆಯಲ್ಲಿ ಸೋಲಬಹುದು, ಆದರೆ ಜನರ ಮನಗಳಲ್ಲಿ ಸಾಧಾ ಅಧಿಕಾರದಲ್ಲೇ ಇರುತ್ತದೆ. ನಮ್ಮ ಪಕ್ಷ ಎಲ್ಲಾ ಮತಗಳನ್ನು ಗೌರವಿಸುತ್ತದೆ, ಆದರೆ ‘ನಮ್ಮ ಮತವೇ ಶ್ರೇಷ್ಠ’ ಎಂಬ ಅಹಂಕಾರವನ್ನು ದ್ವೇಷಿಸುತ್ತದೆ. ನೊಂದವರ ಹಾಗೂ ಶೋಷಿತರ ಪರವಾಗಿ ನಿಲ್ಲುವುದು ಸಿಪಿಎಂ ಸಿದ್ಧಾಂತ ಎಂದರು.

ಪಕ್ಷದ ಜಿಲ್ಲಾ ಸಮಿತಿ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಸರ್ಕಾರದ ನೀತಿಗಳ ಫಲವಾಗಿ ಜಿಲ್ಲೆಯ ಜನರು ಬಹು ಸಂಖ್ಯೆಯಲ್ಲಿ ಸಂಕಷ್ಟದಲ್ಲಿದ್ದಾರೆ, ಸಿಪಿಎಂ ಪಕ್ಷವೇ ಜನರಿಗೆ ಪರ್ಯಾಯ ಆಗಬೇಕು. ಬೆಲೆ ಏರಿಕೆ ತಡೆದು ಜನರ ಜೀವನೋಪಾಯವನ್ನು ರಕ್ಷಿಸುವ ಹಾಗೂ ಕಾರ್ಮಿಕ ವರ್ಗದ ಹಕ್ಕುಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಹೇಳಿದರು.

ಪಕ್ಷದ ಹಿರಿಯ ಸದಸ್ಯ ಕೆ. ಶಂಕರ್ ಪಕ್ಷದ ನಾಮಫಲಕವನ್ನು ಉದ್ಘಾಟಿಸಿದರು. ಉಡುಪಿ ವಲಯ ಸಮಿತಿ ಕಾರ್ಯದರ್ಶಿ ಶಶಿಧರ್ ಗೊಲ್ಲ ಅಧ್ಯಕ್ಷತೆ ವಹಿಸಿದ್ದರು. ಸಹೋದರ ಪಕ್ಷ ಸಿಪಿಐ ಕಾರ್ಯದರ್ಶಿ ಶೇಖರ್, ಕಟ್ಟಡ ಮಾಲಕರಾದ ಲಕ್ಷ್ಮೀನಾರಾಯಣ ಭಟ್, ಜಿಲ್ಲಾ ಸಮಿತಿ ಸದಸ್ಯರು ಕವಿರಾಜ್ ಎಸ್. ಕಾಂಚನ್, ಉಮೇಶ್ ಕುಂದರ್, ಶೀಲಾವತಿ ಪಡುಕೋಣೆ, ವಾಮನ ಪೂಜಾರಿ, ಸಿಪಿಐ ನಾಯಕ ಶಿವಾನಂದ, ಕೋಣಿ ವೆಂಕಟೇಶ್, ಬಲ್ಕೀಸ್, ಸರೋಜ, ಸಂಜೀವ ಬಳ್ಕೂರು ಮತ್ತು ಇತರರು ಹಾಜರಿದ್ದರು.



