ಉಡುಪಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಉಡುಪಿ, ಕೆ.ಎಂ.ಸಿ ಮಣಿಪಾಲದ ಶ್ರವಣ ವಿಭಾಗ ಹಾಗೂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಡುಪಿ ನಾರ್ಥ್ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಉಡುಪಿ ನಾರ್ಥ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಶ್ರವಣ ದಿನವನ್ನು ಆಚರಿಸಲಾಯಿತು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಮಾತನಾಡಿ, ಸಮುದಾಯದಿಂದ ಹಿಡಿದು ತರಗತಿ ಕೋಣೆಯವರೆಗೆ ಎಲ್ಲಾ ಮಕ್ಕಳಿಗಾಗಿ ಶ್ರವಣದ ಕಾಳಜಿ ಎಂಬ ಥೀಮ್ ಕುರಿತು ವಿವರಿಸಿ, ಮಕ್ಕಳಲ್ಲಿ ಕಂಡುಬರುವ ತಡೆಗಟ್ಟಬಹುದಾದ ಶ್ರವಣ ನಷ್ಟವನ್ನು ಕಡಿಮೆ ಮಾಡಿ ಅವರ ಅರಿವಿನ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ಸಾಮಾಜಿಕವಾಗಿ ಎಲ್ಲರೊಡನೆ ಬೆರೆಯುವಂತೆ ಮಾಡುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರವಣ ತಜ್ಞೆ ಸಮೀಕ್ಷಾ ಡಿ. ರಾವ್, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಬಸಪ್ಪ ಬೆನ್ನಪ್ಪನವರ್, ಕೆ.ಎಂ.ಸಿ ಮಣಿಪಾಲ ಶ್ರವಣ ವಿಭಾಗದ ದಿಯಾ, ಆಂಡ್ರಿವ್ ಹಾಗೂ ಸಹಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಸಾವಿತ್ರಿ ಕೆ. ಸ್ವಾಗತಿಸಿ, ಸಹಶಿಕ್ಷಕ ಗುರು ಪ್ರಸಾದ್ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಶಾಲೆಯ 85 ವಿದ್ಯಾರ್ಥಿಗಳಿಗೆ ಕಿವಿ ತಪಾಸಣೆ ನಡೆಸಿ ಸೂಕ್ತ ಸಲಹೆ ನೀಡಲಾಯಿತು.



