ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ಉಡುಪಿ ತಾಲೂಕು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಉಡುಪಿ ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ 2026-27ನೇ ಸಾಲಿನ ಪ್ರಥಮ ತ್ರೈಮಾಸಿಕ ಸಭೆ ಬ್ರಹ್ಮಗಿರಿಯ ಪ್ರಗತಿಸೌಧ ಸಭಾಭವನದಲ್ಲಿ ಗುರುವಾರ ನಡೆಯಿತು.

ಸಭೆಯನ್ನು ಅಧ್ಯಕ್ಷತೆ ವಹಿಸಿದ್ದ ಸತ್ಯಾನಂದ ನಾಯಕ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಗತ ಸಭೆಯ ವರದಿಯನ್ನು ತಾಲೂಕು ವೇದಿಕೆಯ ಕಾರ್ಯದರ್ಶಿ ಹಾಗೂ ಯೋಜನಾಧಿಕಾರಿ ಸುರೇಂದ್ರ ನಾಯ್ಕ್ ವಾಚಿಸಿದರು. ಬಳಿಕ ವಿವಿಧ ವಲಯಗಳ ಮೇಲ್ವಿಚಾರಕರು 2025-26ನೇ ಸಾಲಿನ ಜನಜಾಗೃತಿ ಕಾರ್ಯಕ್ರಮಗಳ ಸಾಧನ ವರದಿಯನ್ನು ಮಂಡಿಸಿದರು.

2026-27ನೇ ಸಾಲಿನ ಕ್ರಿಯಾಯೋಜನೆ ಕುರಿತು ಮಾತನಾಡಿದ ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಮೇ 31ರಂದು ವಿಶ್ವ ತಂಬಾಕು ವಿರೋಧಿ ದಿನಾಚರಣೆ, ಜೂನ್ 26ರಂದು ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ, ತಾಲೂಕಿನಲ್ಲಿ 15 ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳು, ನವಜೀವನ ಸಮಿತಿಗಳ ಬಲವರ್ಧನೆ, ತಾಲೂಕು ಮಟ್ಟದ ನವಜೀವನೋತ್ಸವ, ಅಕ್ಟೋಬರ್ 2ರಂದು ಗಾಂಧಿ ಜಯಂತಿ ಕಾರ್ಯಕ್ರಮ ಸೇರಿದಂತೆ ವಿವಿಧ ಯೋಜನೆಗಳ ಕುರಿತು ವಿವರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾಗಿ ರಾಜು ಪೂಜಾರಿ ಉಪ್ಪೂರು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇದೇ ವೇಳೆ ವಿವಿಧ ವಲಯಗಳ ಅಧ್ಯಕ್ಷರನ್ನೂ ಆಯ್ಕೆ ಮಾಡಲಾಯಿತು. ಉಪ್ಪೂರು ವಲಯಕ್ಕೆ ಸುನಿಲ್ ಶೆಟ್ಟಿ, ಮಣಿಪಾಲ ವಲಯಕ್ಕೆ ವಸಂತ ಶೆಟ್ಟಿ, ಪೆರ್ಡೂರು ವಲಯಕ್ಕೆ ಸತೀಶ್ ಶೆಟ್ಟಿ, ಅಂಬಾಗಿಲು ವಲಯಕ್ಕೆ ಮಹಾಬಲ ಶೆಟ್ಟಿ, ಅಂಬಲಪಾಡಿ ವಲಯಕ್ಕೆ ಮಹೇಶ್ ಕುಮಾರ್, ಮಲ್ಪೆ ವಲಯಕ್ಕೆ ಉದಯ್ ಕುಮಾರ್ ಶೆಟ್ಟಿ ಹಾಗೂ ಹಿರಿಯಡ್ಕ ವಲಯಕ್ಕೆ ಶ್ರೀಮತಿ ನಳಿನಾ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯು ಶ್ರೀಮತಿ ಪ್ರತಿಭಾ ಹಾಗೂ ಶ್ರೀಮತಿ ಚಂದ್ರಾವತಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಮೇಲ್ವಿಚಾರಕ ಬಾಲಚಂದ್ರ ಸ್ವಾಗತಿಸಿದರು. ಪ್ರೇಮ ವಂದಿಸಿದರು. ಕಾರ್ಯಕ್ರಮವನ್ನು ಗಣೇಶ್ ಆಚಾರ್ಯ ನಿರೂಪಿಸಿದರು.



