ಉಡುಪಿ: ಉಡುಪಿ ಜಿಲ್ಲೆಯ 71 ಬಿಎಸ್ಎನ್ಎಲ್ ಟವರ್ಗಳಿಗೆ ಹೊಸ ಬ್ಯಾಟರಿ ಮಂಜೂರಾತಿ ದೊರೆತಿದೆ ಎಂದು ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬರೆದ ಪತ್ರದ ಮೂಲಕ ತಿಳಿಸಿದ್ದಾರೆ.

ಸಚಿವರ ಪತ್ರದ ಪ್ರಕಾರ, ಮಂಜೂರಾದ ಬ್ಯಾಟರಿಗಳನ್ನು 2026ರ ಜನವರಿ ಒಳಗೆ ಜಿಲ್ಲೆಗೆ ಸರಬರಾಜು ಮಾಡುವ ಯೋಜನೆ ಇದೆ. ಇದಲ್ಲದೆ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮನವಿಯಂತೆ 21 ಹೊಸ ಸೊಲಾರ್ ಸ್ಥಾವರಗಳು ಅನುಮೋದನೆಗೊಂಡಿದ್ದು, ಇವುಗಳನ್ನು ಮಾರ್ಚ್ 2026ರೊಳಗೆ ಅಳವಡಿಕೆ ಪೂರ್ಣಗೊಳ್ಳಲಿದೆ. ಇತ್ತೀಚೆಗೆ ಉಡುಪಿ ಬಿಎಸ್ಎನ್ಎಲ್ ಕಚೇರಿಯಲ್ಲಿ ನಡೆದ ಕುಂದುಕೊರತೆಗಳ ಪರಿಶೀಲನಾ ಸಭೆಯಲ್ಲಿ ಟವರ್ಗಳಲ್ಲಿ ಎದುರವಾಗುತ್ತಿರುವ ವಿದ್ಯುತ್ ಸಮಸ್ಯೆ, ಬ್ಯಾಕಪ್ ಕೊರತೆ ಮತ್ತು ಸೇವಾ ವ್ಯತ್ಯಯದ ವಿಚಾರಗಳು ಸಂಸದರ ಗಮನಕ್ಕೆ ತರಲಾಗಿತ್ತು. ಇದರ ಬಳಿಕ ಸಂಸದರು ಕೇಂದ್ರ ಸಚಿವಾಲಯಕ್ಕೆ ಸಲ್ಲಿಸಿದ ಮನವಿಗೆ ಪ್ರತಿಯಾಗಿ ಈ ಮಂಜೂರಾತಿ ಲಭಿಸಿದೆ.

ಹೊಸ ಬ್ಯಾಟರಿ ಮತ್ತು ಸೊಲಾರ್ ವ್ಯವಸ್ಥೆಗಳ ಅಳವಡಿಕೆಯಿಂದ ಟವರ್ಗಳ ನಿರಂತರ ಕಾರ್ಯಾಚರಣೆ ಸುಧಾರಣೆ, ಜಾಲ ಗುಣಮಟ್ಟದ ಏರಿಕೆ ಮತ್ತು ಸೇವಾ ವ್ಯತ್ಯಯದ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಸಂಸದರ ಕಚೇರಿಯ ಪ್ರಕಟಣೆ ತಿಳಿಸಿದೆ.



