ಉಡುಪಿ : ಕನ್ನಡ ಚಿತ್ರರಂಗದ ನವರಸ ನಾಯಕ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಶನಿವಾರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತಿಭಾವದಿಂದ ದೇವರ ದರ್ಶನ ಪಡೆದರು. ದೇವಸ್ಥಾನಕ್ಕೆ ಆಗಮಿಸಿದ ಜಗ್ಗೇಶ್ ಅವರನ್ನು ಶ್ರೀ ಕ್ಷೇತ್ರದ ವತಿಯಿಂದ ಸಾಂಪ್ರದಾಯಿಕ ರೀತಿಯಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಬಳಿಕ ಅವರು ಮಹಾಲಕ್ಷ್ಮೀ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು. ದೇವರ ದರ್ಶನದ ವೇಳೆ ಭಕ್ತರು ಹಾಗೂ ಅಭಿಮಾನಿಗಳು ಜಗ್ಗೇಶ್ ಅವರನ್ನು ಕಾಣಲು ದೇವಸ್ಥಾನದಲ್ಲಿ ಸೇರಿಕೊಂಡಿದ್ದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ವತಿಯಿಂದ ಜಗ್ಗೇಶ್ ಅವರಿಗೆ ಶಾಲು ಹೊದಿಸಿ, ಪ್ರಸಾದ ನೀಡಿ ಗೌರವಿಸಲಾಯಿತು. ದೇವಾಲಯದ ಆಧ್ಯಾತ್ಮಿಕ ವಾತಾವರಣ ಹಾಗೂ ಭಕ್ತರ ಆತ್ಮೀಯ ಸ್ವಾಗತಕ್ಕೆ ಸಂತಸ ವ್ಯಕ್ತಪಡಿಸಿದ ಜಗ್ಗೇಶ್, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನವು ಶಾಂತಿ ಮತ್ತು ಭಕ್ತಿಯ ನೆಲೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ಅಧ್ಯಕ್ಷ ಗಿರಿಧರ್ ಸುವರ್ಣ, ಶೇಖರ್ ಪುತ್ರನ್, ಪುರೋಹಿತರಾದ ಶ್ರೀನಿವಾಸ್ ಉಪಾಧ್ಯಾಯ, ಶ್ರೀಷ ಉಪಾಧ್ಯಾಯ, ಪದ್ಮನಾಭ ಕೋಟ್ಯಾನ್ ಸೇರಿದಂತೆ ದೇವಸ್ಥಾನದ ಪ್ರಮುಖರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.



